ADVERTISEMENT

ಕೋವಿಡ್ ವಾರ್ಡ್‌‌ನಲ್ಲಿ ಕರ್ತವ್ಯ ನಿರ್ವಹಿಸಲು ನಿರಾಕರಿಸಿ ರಾಜೀನಾಮೆ ನೀಡಿದ ವೈದ್ಯ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2020, 6:19 IST
Last Updated 25 ಮಾರ್ಚ್ 2020, 6:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಂಚಿ:ಜಾರ್ಖಂಡ್‌ನ ಪಶ್ಚಿಮ ಸಿಂಗಭುಂ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೊರೊನಾ ವೈರಸ್ ಐಸೋಲೇಷನ್ ವಾರ್ಡ್‌ನಲ್ಲಿ ಸೇವೆ ಸಲ್ಲಿಸಲು ನಿರಾಕರಿಸಿ ವೈದ್ಯ ದಂಪತಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಮೊದಲು ವಾಟ್ಸ್‌ಆ್ಯಪ್‌ನಲ್ಲಿ ಕಳಿಸಿದ ಈ ದಂಪತಿ ನಂತರ ಇಮೇಲ್ ಮೂಲಕ ಕಳುಹಿಸಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾಜೀನಾಮೆ ನೀಡಿರುವ ಡಾ. ಅಲೋಕ್ ಟಿರ್ಕೆ ಅವರು ತಕ್ಷಣವೇ ಕೆಲಸಕ್ಕೆ ಹಾಜರಾಗಬೇಕು ಎಂದು ರಾಜ್ಯ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಡಾ.ನಿತಿನ್ ಮದನ್ ಕುಲಕರ್ಣಿ ನಿರ್ದೇಶಿಸಿದ್ದಾರೆ ಎಂದು ಪಶ್ಚಿಮ ಸಿಂಗಭುಂ ಸಿವಿಲ್ ಸರ್ಜನ್ ಡಾ.ಮಂಜು ದುಬೆ ಹೇಳಿದ್ದಾರೆ.

ಆರೋಗ್ಯ ಇಲಾಖೆಯ ಕಾರ್ಯದರ್ಶಿಯವರ ನಿರ್ದೇಶನದಂತೆ, 24 ಗಂಟೆಗಳೊಳಗೆ ಕರ್ತವ್ಯಕ್ಕೆ ಹಾಜರಾಗಬೇಕು ಇಲ್ಲವಾದರೆ ಜಾರ್ಖಂಡ್ ಸಾಂಕ್ರಾಮಿಕ ಕಾಯಿಲೆ (ಕೋವಿಡ್-19) ನಿಯಂತ್ರಣ ಕಾಯ್ದೆ -2020 ಮತ್ತು ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ, 1987 ಅಡಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಡಾ.ಟಿರ್ಕೆ ಅವರಿಗೆ ತಿಳಿಸಿದ್ದೇನೆ. ತಕ್ಷಣವೇ ಕರ್ತವ್ಯಕ್ಕೆ ಹಾಜರಾಗದಿದ್ದರೆ ಭಾರತೀಯ ಮೆಡಿಕಲ್ ಕೌನ್ಸಿಲ್ ನೋಂದಣಿಯನ್ನೂ ರದ್ದು ಮಾಡಲಾಗುತ್ತದೆ ಎಂದಿದ್ದಾರೆ ದುಬೆ.

ADVERTISEMENT

ಸೋಮವಾರ ರಾತ್ರಿ ಡಾ.ಟಿರ್ಕೆ ಅವರ ರಾಜೀನಾಮೆ ಪತ್ರ ವಾಟ್ಸ್‌ಆ್ಯಪ್‌ನಲ್ಲಿ ಸಿಕ್ಕಿತ್ತು, ಆಮೇಲೆ ಮಂಗಳವಾರ ಬೆಳಗ್ಗೆ ಇಮೇಲ್ ಮೂಲಕ ಸಿಕ್ಕಿತು ಎಂದಿದ್ದಾರೆ.

ಜಿಲ್ಲಾ ಮಿನರಲ್ ಫಂಡ್ ಟ್ರಸ್ಟ್ ಅಧೀನದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿದ್ದರು ಡಾ.ಟಿರ್ಕೆ. ಆದರೆ ಅಲ್ಲಿ ರಾಜೀನಾಮೆ ನೀಡಿ ಹೊಸತಾಗಿ ಆರಂಭಿಸಿದ ದುಮ್ಕಾ ಮೆಡಿಕಲ್ ಕಾಲೇಜು ಹಾಸ್ಪಿಟಲ್‌ಗೆ ಸೇರಿದ್ದರು. ಅಲ್ಲಿ ರಾಜೀನಾಮೆ ನೀಡಿ ಮತ್ತೆ ಸದರ್ ಆಸ್ಪತ್ರೆಗೆ ಕೆಲವು ದಿನಗಳ ಹಿಂದೆಯಷ್ಟೇ ಸೇರಿದ್ದರು. ಮೂರು ದಿನಗಳ ಹಿಂದೆಯಷ್ಟೇ ಅವರಿಗೆ ಕೊರೊನಾ ವೈರಸ್ ಐಸೋಲೇಷನ್ ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸಲು ಹೇಳಲಾಗಿತ್ತು. ಈ ದಂಪತಿ ಹೊರತು ಪಡಿಸಿ ಸದರ್ ಆಸ್ಪತ್ರೆಯಲ್ಲಿರುವ 23 ವೈದ್ಯರುಗಳಲ್ಲಿ ಯಾರೊಬ್ಬರೂ ಇಲ್ಲಿಯವರೆಗೆ ರಜೆ ತೆಗೆದುಕೊಂಡಿಲ್ಲ, ರಾಜೀನಾಮೆ ನೀಡಿಲ್ಲ .ಡಾ.ಟರ್ಕೆ ಅವರ ಪತ್ನಿ ಡಾ.ಸೌಮ್ಯ ಅವರಿಗೆ ಆರೋಗ್ಯ ಸಮಸ್ಯೆ ಇರುವ ಕಾರಣ ರಾಜೀನಾಮೆ ನೀಡಿರುವುದಾಗಿಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ದುಬೆ ಹೇಳಿದ್ದಾರೆ.

ಆದಾಗ್ಯೂ, ಕಚೇರಿ ರಾಜಕಾರಣವೇ ಇದಲ್ಲದಕ್ಕೂ ಕಾರಣ ಎಂದು ಡಾ.ಟಿರ್ಕೆ ಆರೋಪಿಸಿದ್ದಾರೆ.
ನನ್ನ ಪತ್ನಿ ಮತ್ತು ಸಹೋದರಿಗೆ ರೋಗ ಪ್ರತಿರೋಧ ಶಕ್ತಿ ಕುಂದಿದ್ದು, ಬೇಗನೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ರಾಜೀನಾಮೆ ನೀಡಲು ನಿರ್ಧರಿಸಿದೆವು. ನನ್ನ ಸಹೋದರಿಗೆ ಇತ್ತೀಚೆಗೆ ಕಿಡ್ನಿ ಕಸಿ ನಡೆದಿತ್ತು.ನಾನು ಹಿಂಜರಿದು ಓಡಿಹೋಗುವ ಸ್ವಭಾವದವನಲ್ಲ. ಸದ್ಯ ನಾನು ಕೆಲಸ ಮಾಡುವೆ.ಕೋವಿಡ್-19 ಸಂಕಷ್ಟ ಮುಗಿದ ಮೇಲೆ ರಾಜೀನಾಮೆ ನೀಡಿ ನಾನು ಕೆಲಸ ಬಿಡುತ್ತೇನೆ ಎಂದು ಡಾ.ಟಿರ್ಕೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.