ADVERTISEMENT

ವೈದ್ಯರು ಜೀತದಾಳುಗಳಂತೆ ಕೆಲಸ ಮಾಡಲು ಸಾಧ್ಯವಿಲ್ಲ: ಸಂಸದೆ ದಸ್ತಿದಾರ್‌

ಪಿಟಿಐ
Published 2 ಫೆಬ್ರುವರಿ 2024, 14:48 IST
Last Updated 2 ಫೆಬ್ರುವರಿ 2024, 14:48 IST
   

ನವದೆಹಲಿ : ‘ವೈದ್ಯರು ಜೀತದಾಳುಗಳಂತೆ ಕೆಲಸ ಮಾಡಲು ಸಾಧ್ಯವಿಲ್ಲ. ಅವರ ವೃತ್ತಿಯನ್ನು ಇತರ ವೃತ್ತಿಗಳೊಂದಿಗೆ ಹೋಲಿಕೆ ಮಾಡಲಾಗದು’ ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೆ ಕಾಕೋಳಿ ಘೋಷ್‌ ದಸ್ತಿದಾರ್‌ ಶುಕ್ರವಾರ ಹೇಳಿದ್ದಾರೆ.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗಿಯಾದ ಅವರು, ವೈದ್ಯರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಇತ್ತೀಚೆಗೆ ಹೊರಡಿಸಲಾದ ಮಾರ್ಗಸೂಚಿಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

‘ವೈದ್ಯರು ಜೀತದಾಳುಗಳ ರೀತಿಯಲ್ಲಿ ನಸುಕಿನ 4 ಗಂಟೆಗೆ ಹಾಗೂ ಸಂಜೆ 4 ಗಂಟೆಗೆ ಕೆಲಸಕ್ಕೆ ಹಾಜರಾಗಬೇಕೆಂಬ ಕ್ರೂರ ಸೂಚನೆಯನ್ನು ಎನ್‌ಎಂಸಿ ಇತ್ತೀಚೆಗೆ ಹೊರಡಿಸಿದ ಮಾರ್ಗಸೂಚಿಯಲ್ಲಿ ನೀಡಿದೆ. ಖಾಸಗಿಯಾಗಿ ವೃತ್ತಿ ನಡೆಸುವ ಕೆಲ ವೈದ್ಯರು ತಮ್ಮ ಬದಲಾಗಿ ವೈದ್ಯಕೀಯ ಕಾಲೇಜುಗಳ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಕೆಲಸ ಮಾಡಿಸುತ್ತಿದ್ದು, ಇದು ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡುತ್ತಿದೆ. ಹೀಗಾಗಿ ವೈದ್ಯರು ಖಾಸಗಿಯಾಗಿ ವೃತ್ತಿ ಕೈಗೊಳ್ಳುವುದನ್ನು ಎನ್‌ಎಂಸಿ ಕಳೆದ ತಿಂಗಳು ನಿಷೇಧಿಸಿದೆ’ ಎಂದರು.

ADVERTISEMENT

‘ದೇಶದಲ್ಲಿ ಪ್ರಸ್ತುತ 16 ಏಮ್ಸ್‌ 315 ವೈದ್ಯಕೀಯ ಕಾಲೇಜುಗಳು ಇವೆ. ಆದರೆ ವೈದ್ಯಕೀಯ ಕೋರ್ಸ್‌ಗಳನ್ನು ಬೊಧಿಸುವ ಅಧ್ಯಾಪಕರು ಎಲ್ಲಿದ್ದಾರೆ? ಪ್ರಸ್ತುತ ಎನ್‌ಎಂಸಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಅಧ್ಯಾಪಕರ ಸಂಖ್ಯೆಯನ್ನು ಮತ್ತಷ್ಟು ಕುಗ್ಗಿಸುತ್ತದೆ. ನಮ್ಮ ದೇಶದಲ್ಲಿ ವೈದ್ಯರಿಗೆ ಸರಿಯಾಗಿ ಸಂಬಳವನ್ನು ನೀಡುತ್ತಿಲ್ಲ. ಈ ಮಾರ್ಗಸೂಚಿಗಳಿಂದಾಗಿ ಅವರು ಮತ್ತಷ್ಟು ಒತ್ತಡಕ್ಕೊಳಗಾಗುತ್ತಾರೆ. ಅಲ್ಲದೇ ಅಧ್ಯಾಪಕರು ತಮ್ಮ ವೃತ್ತಿಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.