ಕೋಲ್ಕತ್ತ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಮುಷ್ಕರನಿರತ ಕಿರಿಯ ವೈದ್ಯರ ನಡುವೆಸೋಮವಾರ ನಡೆದ ಸಂಧಾನ ಫಲಪ್ರದವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಏಳು ದಿನಗಳಿಂದ ಉಂಟಾಗಿದ್ದ ಅನಿಶ್ಚಿತತೆಗೆ ತೆರಬಿದ್ದಿತು.
‘ಕಾರ್ಯಸ್ಥಳದಲ್ಲಿ ಭದ್ರತೆ ಒದಗಿಸುವುದು ಸೇರಿ ವೈದ್ಯರ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ವೈದ್ಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ದೂರು ಪರಿಹಾರ ಘಟಕವನ್ನು ಸ್ಥಾಪಿಸಬೇಕು ಎಂಬ ಬೇಡಿಕೆಗೂ ಮುಖ್ಯಮಂತ್ರಿ ಒಪ್ಪಿದರು. ವೈದ್ಯರ ಬೇಡಿಕೆಯಂತೆ ಮಾಧ್ಯಮಗಳ ಉಪಸ್ಥಿತಿಯಲ್ಲಿಯೇ ಸಭೆ ನಡೆಯಿತು.
ಮುಷ್ಕರನಿರತರು ಪಟ್ಟುಹಿಡಿದಂತೆ, ಮುಖ್ಯಮಂತ್ರಿ ಹಾಗೂ ವೈದ್ಯ ಪ್ರತಿನಿಧಿಗಳ ನಡುವಿನ ಸಂಧಾನ ಸಭೆಯ ಕಲಾಪವನ್ನು ವೈದ್ಯರು ವೀಕ್ಷಿಸಲು ಅನುವಾಗುವಂತೆ ನೇರಪ್ರಸಾರ ಮಾಡಲಾಯಿತು.
ಸಭೆಯ ನಂತರ, ಸಹೋದ್ಯೋಗಿಗಳು ಧರಣಿ ನಡೆಸುತ್ತಿದ್ದ ಎನ್ಆರ್ಎಸ್ ವೈದ್ಯಕೀಯ ಕಾಲೇಜು ಆವರಣಕ್ಕೆ ಮರಳಿದ ವೈದ್ಯ ಪ್ರತಿನಿಧಿಗಳು ಮುಷ್ಕರ ಅಂತ್ಯಗೊಳಿಸುವ ನಿರ್ಧಾರವನ್ನು ಪ್ರಕಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.