ADVERTISEMENT

ಭೇಟಿ ವ್ಯರ್ಥವಾಗಲು ಬಿಡಲ್ಲ: ಟ್ರಂಪ್

ವಿವಾದದ ಹೇಳಿಕೆಗೆ ಅವಕಾಶ ಇಲ್ಲ: ಎಚ್ಚರಿಕೆಯ ಪ್ರತಿಕ್ರಿಯೆ

ಪಿಟಿಐ
Published 26 ಫೆಬ್ರುವರಿ 2020, 1:55 IST
Last Updated 26 ಫೆಬ್ರುವರಿ 2020, 1:55 IST
ಟ್ರಂಪ್‌ ಹಾಗೂ ಮೋದಿ ಅವರು ಔಪಚಾರಿಕ ಮಾತುಕತೆಯ ಬಳಿಕ ಜೊತೆಯಾಗಿ ಜಂಟಿ ಪತ್ರಿಕಾಗೋಷ್ಠಿಗೆ ಬಂದ ಕ್ಷಣ –ರಾಯಿಟರ್ಸ್‌ ಚಿತ್ರ
ಟ್ರಂಪ್‌ ಹಾಗೂ ಮೋದಿ ಅವರು ಔಪಚಾರಿಕ ಮಾತುಕತೆಯ ಬಳಿಕ ಜೊತೆಯಾಗಿ ಜಂಟಿ ಪತ್ರಿಕಾಗೋಷ್ಠಿಗೆ ಬಂದ ಕ್ಷಣ –ರಾಯಿಟರ್ಸ್‌ ಚಿತ್ರ   

ನವದೆಹಲಿ : ತಮ್ಮ ಭಾರತ ಭೇಟಿಯಿಂದ ಯಾವುದೇ ತಪ್ಪು ಸಂದೇಶ ರವಾನೆಯಾಗಬಾರದು ಎಂದು ಟ್ರಂಪ್‌ ಬಹಳ ಎಚ್ಚರ ವಹಿಸಿದ್ದು ಮಾಧ್ಯಮಗೋಷ್ಠಿಯಲ್ಲಿ ಕಂಡುಬಂತು.

ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ‍ಪ್ರಶ್ನೆಗೆ ಅವರು ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದರು.

‘ನಾನು ವಿವಾದ ಸೃಷ್ಟಿಸಲು ಬಯಸುವುದಿಲ್ಲ. ಎರಡು ದಿನಗಳ ಭಾರತ ಭೇಟಿ ಮತ್ತು ಅದಕ್ಕಾಗಿ ನಡೆಸಿದ ಎರಡು ದಿನಗಳ ಪ್ರಯಾಣವು ವ್ಯರ್ಥವಾಗುವುದು ನನಗೆ ಇಷ್ಟವಿಲ್ಲ. ನೀವು ಏನೋ ಪ್ರಶ್ನೆ ಕೇಳಿ, ಅದಕ್ಕೆ ನಾನು ಏನೋ ಹೇಳಿದರೆ ನೀವು ಅದನ್ನೇ ಭಾರಿ ಸುದ್ದಿಯಾಗಿಸುವಿರಿ. ನನ್ನ ಪ್ರವಾಸದ ಬಗ್ಗೆ ಮಾತನಾಡುವುದೇ ಇಲ್ಲ. ಅದು ನನಗೆ ಇಷ್ಟವಿಲ್ಲ’ ಎಂದರು.

ADVERTISEMENT

‘ಸಿಎಎ, ಭಾರತದ ಆಂತರಿಕ ವಿಚಾರ. ಭಾರತ ಸರಿಯಾದ ತೀರ್ಮಾನ ಕೈಗೊಳ್ಳುವುದೆಂಬ ವಿಶ್ವಾಸವಿದೆ. ಹಿಂಸಾಚಾರ ಘಟನೆಯ ಬಗ್ಗೆ ನಾನು ಕೇಳಿದ್ದೇನೆ. ಆದರೆ, ನಮ್ಮ ಮಾತುಕತೆಯ ಸಂದರ್ಭದಲ್ಲಿ ಆ ವಿಚಾರ ಪ್ರಸ್ತಾಪವಾಗಿಲ್ಲ. ಅದೂ ಆಂತರಿಕ ವಿಚಾರವೇ’ ಎಂದರು.

ಮಂಗಳವಾರದ ಟ್ರಂಪ್‌ ಕಾರ್ಯಕ್ರಮ

-ಬೆಳಿಗ್ಗೆ ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತ. ಟ್ರಂಪ್‌ ದಂಪತಿಯನ್ನು ಬರಮಾಡಿಕೊಂಡ
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ
ಮೋದಿ

- ಮಧ್ಯಾಹ್ನ ರಾಜ್‌ಘಾಟ್‌ಗೆ ತೆರಳಿ, ಗಾಂಧಿ ಸ್ಮಾರಕಕ್ಕೆ ಗೌರವಾರ್ಪಣೆ. ಭೇಟಿಯ ನೆನಪಿಗಾಗಿ ಗಿಡ ನೆಟ್ಟರು

-ಹೈದರಾಬಾದ್‌ ಹೌಸ್‌ನಲ್ಲಿ ಮೋದಿ ಜತೆ ಮಾತುಕತೆ, ಸೇನಾ ಒಪ್ಪಂದಗಳಿಗೆ ಸಹಿ

- ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಸಂವಾದ

- ಸಂಜೆ ಮೋದಿ ಜತೆ ಜಂಟಿ ಪತ್ರಿಕಾಗೋಷ್ಠಿ

- ರಾತ್ರಿ ರಾಷ್ಟ್ರಪತಿ ಭವನದಲ್ಲಿ ಔತಣಕೂಟ

- ರಾತ್ರಿ 10ಕ್ಕೆ ಅಮೆರಿಕಕ್ಕೆ ಪ್ರಯಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.