ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಸಕ್ತ ಕೇಂದ್ರದ ಬಜೆಟ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ದೇಶದ ನಿರುದ್ಯೋಗ ಸಮಸ್ಯೆಕುರಿತು ಧ್ವನಿ ಎತ್ತಿದ್ದಾರೆ.
ನನ್ನ ಪ್ರಶ್ನೆಗಳಿಂದಾಗಿ ದಯಮಾಡಿ ಭಯ ಪಡಬೇಡಿ ಹಣಕಾಸು ಸಚಿವರೆ. ಈ ದೇಶದ ಯುವಜನರ ಪರವಾಗಿ ನಾನು ನಿಮಗೆ ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ ಮತ್ತು ಇದಕ್ಕೆ ಉತ್ತರಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಯುವಜನರಿಗೆ ಉದ್ಯೋಗ ಬೇಕಾಗಿದೆ, ಆದರೆ ಸರ್ಕಾರವು ಉದ್ಯೋಗಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್, #JawabDoMantriJi (ಮಂತ್ರಿಗಳೇ ಉತ್ತರಿಸಿ) ಎಂಬ ಹ್ಯಾಷ್ಟ್ಯಾಗ್ ಹಾಕಿದ್ದಾರೆ.
ಇದರೊಂದಿಗೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗಳಿರುವ ಸುದ್ದಿ ಪತ್ರಿಕೆಗಳ ಪ್ರತಿಯನ್ನು ಲಗತ್ತಿಸಿದ್ದಾರೆ. ಇದರಲ್ಲಿ ಒಂದು ವೇಳೆ ನಾನು ಉದ್ಯೋಗಗಳ ಅಂಕಿ ಅಂಶಗಳನ್ನು ಹಂಚಿಕೊಂಡಿದ್ದೇ ಆದರೆ ರಾಹುಲ್ ಗಾಂಧಿ ಕೆಲ ತಿಂಗಳ ನಂತರ ನನ್ನನ್ನು ಪ್ರಶ್ನೆ ಮಾಡುತ್ತಿದ್ದರು. ಹಾಗಾಗಿಯೇ ನಾನು ಯಾವುದೇ ಅಂಕಿ ಅಂಶಗಳನ್ನು ನೀಡುವ ಮುನ್ನವೇ ಕೆಲವು ತಿಂಗಳುಗಳ ಕಾಲ ಕಾಯುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಕುಸಿದ ಆರ್ಥಿಕತೆ ಉತ್ತೇಜನಕ್ಕೆ ಈ ಬಾರಿಯ ಬಜೆಟ್ನಲ್ಲಿ ಯಾವುದೇ ಪ್ರಮುಖ ಯೋಜನೆ ರೂಪಿಸದಿರುವುದನ್ನು ಟೀಕಿಸಿದ್ದರು.
‘ಡಿಯರ್ ಪ್ರಧಾನಿ, ದಯವಿಟ್ಟು ಮೋಡಿ ಮಾಡುವ ನಿಮ್ಮ ವ್ಯಾಯಾಮಗಳನ್ನು ಮತ್ತೆ ಮತ್ತೆ ಪ್ರಯತ್ನಿಸಿ. ಅದು ಆರ್ಥಿಕತೆಯನ್ನು ಮೇಲೆತ್ತಲೂಬಹುದು’ ಎಂದು ಒಕ್ಕಣೆ ಬರೆದು ಮೋದಿ ಅವರು ಯೋಗ ದಿನದಂದು ಪ್ರಕಟಿಸಿದ್ದ ಹಳೆ ವಿಡಿಯೋದೊಂದಿಗೆ ಟ್ವೀಟ್ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.