ADVERTISEMENT

ಓಮೈಕ್ರಾನ್ ಮಾರಕ ಅಲ್ಲ, ಆದರೆ.. WHO ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ನೀಡಿದ ಅಭಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2022, 7:41 IST
Last Updated 3 ಜನವರಿ 2022, 7:41 IST
ಡಾ. ಸೌಮ್ಯಾ ಸ್ವಾಮಿನಾಥನ್
ಡಾ. ಸೌಮ್ಯಾ ಸ್ವಾಮಿನಾಥನ್    

ಬೆಂಗಳೂರು: ‘ಕೊರೊನಾವೈರಸ್‌ನ ರೂಪಾಂತರಿ ತಳಿಯಾದ ಓಮೈಕ್ರಾನ್ ಜನಸಮುದಾಯದಲ್ಲಿ ವ್ಯಾಪಕವಾಗಿ ಹರಡಬಹುದು. ಆದರೆ, ಅದು ಮಾರಕ ಅಲ್ಲ, ಅದರ ಬಗ್ಗೆ ಆತಂಕಗೊಳ್ಳುವ ಅವಶ್ಯಕತೆ ಇಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲೂಎಚ್‌ಒ) ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ಓಮೈಕ್ರಾನ್ ಅಲೆ ಬಗ್ಗೆಎನ್‌ಡಿಟಿವಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

‘ಓಮೈಕ್ರಾನ್ ಅಲೆ ವ್ಯಾಪಕವಾಗಿ ಹರಡಬಹುದು. ಇದರಿಂದ ಅನೇಕರು ಬಳಲಬಹುದು. ಆದರೆ, ಬಹುತೇಕರು ಮನೆಯಲ್ಲಿಯೇ ಚಿಕಿತ್ಸೆ ಮಾಡಿಕೊಳ್ಳಬಹುದು. ಹೀಗಿದ್ದರೂ ಇದನ್ನು ನಿರ್ಲಕ್ಷಿಸುವ ಹಾಗಿಲ್ಲ, ಕೆಲ ಪ್ರಕರಣಗಳಲ್ಲಿ ಮಾತ್ರ ವೈದ್ಯರ ತಪಾಸಣೆ ಅಗತ್ಯ’ ಎಂದು ಹೇಳಿದ್ದಾರೆ.

ADVERTISEMENT

‘ಓಮೈಕ್ರಾನ್‌ಗೆ ತುತ್ತಾಗುವವರಿಗೆ ಆಸ್ಪತ್ರೆಯ ಉನ್ನತ ಮಟ್ಟದ ಚಿಕಿತ್ಸೆಗಳು ಬೇಕಾಗಿಲ್ಲ. ಮನೆಯಲ್ಲಿ ಅಥವಾ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕು. ಬಹುಶಃ ಟೆಲಿ ಮೆಡಿಷನ್ ಸೇವೆಯನ್ನು ತ್ವರಿತಗೊಳಿಸಲು ಇದು ಉತ್ತಮ ಸಮಯ’ ಎಂದು ಅವರು ಹೇಳಿದ್ದಾರೆ.

‘ಓಮೈಕ್ರಾನ್ ಬಗ್ಗೆ ಜನ ಹೆದರಿಕೊಳ್ಳುವಂತದ್ದು ಏನೂ ಇಲ್ಲ. ಸಾಮಾನ್ಯವಾಗಿ ನೆಗಡಿಯ ಲಕ್ಷಣಗಳನ್ನು ಇದು ಹೊಂದಿರುತ್ತದೆ ಎಂಬುದನ್ನು ನಾವು ಈಗಾಗಲೇ ನಮ್ಮ ಅಧ್ಯಯನ ಹಾಗೂ ವಿಶ್ಲೇಷಣೆಗಳಲ್ಲಿ ಕಂಡುಕೊಂಡಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿನ ಓಮೈಕ್ರಾನ್‌ಗೆ ಸಂಬಂಧಿಸಿದ ಅಂಕಿ–ಅಂಶಗಳನ್ನು ಪರಿಶೀಲಿಸಿದಾಗ ಇದು ಡೆಲ್ಟಾ ತಳಿಗಿಂತಲೂ ನಾಲ್ಕು ಪಟ್ಟು ಹೆಚ್ಚು ಹರಡುವ ಸಾಮರ್ಥ್ಯ ಹೊಂದಿದೆ’ ಎಂದುಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

‘ಅದಾಗೂ ಓಮೈಕ್ರಾನ್ ಸೋಂಕು ನಿಯಂತ್ರಣಕ್ಕಾಗಿ ಹೆಲ್ತ್‌ಕೇರ್ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರಗಳು ಹಿಂದೆ ಬೀಳಬಾರದು’ ಎಂದು ಅವರು ಎಚ್ಚರಿಸಿದ್ದಾರೆ.

ಡಾ.ಸೌಮ್ಯಾ ಅವರು ಚೆನ್ನೈ ಮೂಲದವರಾಗಿದ್ದು, ಆರೋಗ್ಯ ಸೇವೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರು ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂದು ಖ್ಯಾತರಾಗಿರುವ ಡಾ. ಎಂ.ಎಸ್.ಸ್ವಾಮಿನಾಥನ್ ಅವರ ಮಗಳು.

ಭಾರತದಲ್ಲಿ ಇಲ್ಲಿಯವರೆಗೆ 1200 ಕ್ಕೂ ಹೆಚ್ಚು ಓಮೈಕ್ರಾನ್ ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.