ಕುಂಭಮೇಳಕ್ಕೆ ಬಂದ ಜನರು ಗುರುವಾರ ಪೋಂಟೂನ್ ಸೇತುವೆಯಲ್ಲಿ ಸಾಗಿದರು
ಪಿಟಿಐ ಚಿತ್ರ
ಲಖನೌ: ಸನಾತನ ಧರ್ಮ ಪರಿಪಾಲನೆಗೆ ಏನು ಮಾಡಬೇಕು, ಏನು ಮಾಡಬಾರದು ಹಾಗೂ ವೇದಜ್ಞಾನ ಹರಡಲು ಏನು ಮಾಡಬೇಕು ಎಂಬುದೂ ಸೇರಿ ಹಲವು ಅಂಶಗಳನ್ನು ಒಳ ಗೊಂಡಿರುವ ‘ಹಿಂದೂ ನೀತಿ ಸಂಹಿತೆ’ಯು ಕುಂಭಮೇಳದಲ್ಲಿ ಇದೇ 27ರಂದು ಬಿಡುಗಡೆಯಾಗಲಿದೆ.
ವಾರಾಣಸಿಯಲ್ಲಿನ ಕಾಶಿ ವಿದ್ವತ್ ಪರಿಷತ್ ಇದನ್ನು ಸಿದ್ಧಪಡಿಸಿದೆ. ವಿಶ್ವ ಹಿಂದೂ ಪರಿಷತ್ ಪ್ರಾಯೋಜಿಸಿರುವ, ಮಠಾಧೀಶರ ಸಭೆಯಲ್ಲಿ ಮುನ್ನೂರು ಪುಟಗಳ ‘ಹಿಂದೂ ನೀತಿ ಸಂಹಿತೆ’ಯ ಕುರಿತು ಶನಿವಾರದಿಂದ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ದೇಶದ ವಿವಿಧ ಮಠಾಧೀಶರು ಕಳೆದ 15 ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ ವಿಚಾರಗಳನ್ನು ಒಳಗೊಂಡ ‘ಹಿಂದೂ ನೀತಿ ಸಂಹಿತೆ’ಯಲ್ಲಿನ ಸಾರಾಂಶ ಏನು ಎನ್ನುವುದು ಅಧಿಕೃತವಾಗಿ ಬಹಿರಂಗವಾಗಿಲ್ಲ.
ಹಿಂದೂಗಳ ಸಾಮಾಜಿಕ ಬದುಕು ಹೇಗಿರಬೇಕು ಹಾಗೂ ರೀತಿ–ರಿವಾಜುಗಳನ್ನು ಹೇಗೆಲ್ಲ ಪಾಲಿಸಬೇಕು ಎನ್ನುವುದನ್ನು ನೀತಿ ಸಂಹಿತೆಯು ಒಳಗೊಳ್ಳಲಿದೆ ಎಂದಷ್ಟೆ ಅಖಿಲ ಭಾರತ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಸರಸ್ವತಿ ಹೇಳಿದರು.
ಪುರಾಣಗಳ ಉಲ್ಲೇಖಗಳನ್ನು ಆಧರಿಸಿ ನೀತಿ ಸಂಹಿತೆ ರೂಪಿಸಲಾಗಿದೆ ಎನ್ನಲಾಗಿದ್ದು, ಕರ್ಮ ಸಿದ್ಧಾಂತವನ್ನೇ ಹೆಚ್ಚಾಗಿ ಆಧರಿಸಿದೆ ಎಂದೂ ಹೇಳಲಾಗಿದೆ.
ಕುಂಭಮೇಳದಲ್ಲಿ ಹಿಂದೂ ನೀತಿ ಸಂಹಿತೆಯ ಸಾವಿರಾರು ಪ್ರತಿಗಳನ್ನು ಮುದ್ರಿಸಿ, ಮಾರಾಟ ಮಾಡುವ ಉದ್ದೇಶವೂ ಮಠಾಧೀಶರಿಗೆ ಇದೆ.
ಸಾಮರಸ್ಯ ಮತ್ತು ಏಕತೆಗೆ ಸಂಬಂಧಿಸಿದಂತೆ ಮಹಾಕುಂಭ ಮೇಳವು ನೀಡುವಷ್ಟು ಪ್ರಬಲ ಸಂದೇಶವನ್ನು ವಿಶ್ವದ ಯಾವುದೇ ಕಾರ್ಯಕ್ರಮ ನೀಡುವುದಿಲ್ಲಅಮಿತ್ ಶಾ, ಗೃಹ ಸಚಿವ
ಸಂಹಿತೆಯಲ್ಲಿ ಇರಲಿವೆ ಎನ್ನಲಾದ ಅಂಶಗಳು...
ರಾತ್ರಿ ಹೊತ್ತು ಹಿಂದೂ ವಿವಾಹಗಳನ್ನು ನಡೆಸಕೂಡದು. ಸೂರ್ಯರಶ್ಮಿಯಲ್ಲಿ ವಿವಾಹ ನಡೆಸುವುದೇ ಸನಾತನ ಧರ್ಮದ ಪ್ರಕಾರ ಶ್ರೇಷ್ಠ
ಹೆಣ್ಣುಭ್ರೂಣ ಹತ್ಯೆ ಕೂಡದು. ಮಹಿಳೆ, ಪುರುಷರು ಸಮಾನರು. ಮಹಿಳೆಯರು ಯಜ್ಞವನ್ನೂ ಮಾಡಬಹುದು
ಪರಿಶಿಷ್ಟ ಜಾತಿಯವರಿಗೆ ದೇವಸ್ಥಾನ ಪ್ರವೇಶಿಸದಂತೆ ನಿರ್ಬಂಧಿಸ
ಕೂಡದು. ವೇದಗಳಲ್ಲಿ ಜಾತಿಯ ಕಾರಣದಿಂದಾಗಿ ಅಸ್ಪೃಶ್ಯತೆಯ ಪ್ರತಿಪಾದನೆ ಇಲ್ಲ. ಅದು ಗುಲಾಮಗಿರಿಯ ವ್ಯವಸ್ಥೆಯ ಫಲ
ಬೇರೆ ಧರ್ಮಗಳಿಗೆ ಮತಾಂತರ ಹೊಂದಿದ ಹಿಂದೂಗಳು ತಮ್ಮ ಧರ್ಮಕ್ಕೆ ಇಚ್ಛಾನುಸಾರ ಮರಳುವ ‘ಘರ್ ವಾಪಸಿ’ಯನ್ನು (ವಿಎಚ್ಪಿ ಹೇಳುವ ಪದಪುಂಜ) ಸರಳಗೊಳಿಸಲಾಗುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.