ಲಖನೌ: ಮಾಧ್ಯಮ ಸಂಸ್ಥೆಗಳು ಮತ್ತು ಇತರೆ ಏಜೆನ್ಸಿಗಳು ಚುನಾವಣೆಗಿಂತ ಆರು ತಿಂಗಳು ಮುನ್ನ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸದಂತೆ ನಿಷೇಧ ಹೇರಬೇಕೆಂದು ಬಹುಜನ ಸಮಾಜವಾದಿ ಪಕ್ಷದ(ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಆಗ್ರಹಿಸಿದ್ದಾರೆ.
ಹೀಗೆ ನಿಷೇಧ ವಿಧಿಸುವುದರಿಂದ ಚುನಾವಣೆ ನಡೆಯುವ ರಾಜ್ಯಗಳ ಮೇಲೆ ಸಮೀಕ್ಷೆಗಳು ಪ್ರಭಾವ ಬೀರುವುದನ್ನು ತಡೆಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿನ ಕಾನ್ಶೀರಾಂ ಸ್ಮಾರಕ ಸ್ಥಳದಲ್ಲಿ ಶನಿವಾರ ನಡೆದ ಬಿಎಸ್ಪಿ ಸಂಸ್ಥಾಪಕ ಕಾನ್ಶೀರಾಂ ಅವರ 15ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಕುರಿತು ಶೀಘ್ರದಲ್ಲೇ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ‘ ಎಂದು ತಿಳಿಸಿದರು.
‘ಚುನಾವಣೆ ಸಮೀಕ್ಷೆಯನ್ನು ವ್ಯಾಪಾರವಾಗಿಸಿ, ಹಣಗಳಿಸುವ ಮಾಧ್ಯಮ ಸಂಸ್ಥೆಗಳು ಮತ್ತು ಇತರೆ ಏಜೆನ್ಸಿಗಳಿಗೆ, ಚುನಾವಣೆಗೆ ಆರು ತಿಂಗಳಿಗೆ ಮೊದಲು ಸಮೀಕ್ಷೆಗಳನ್ನು ನಡೆಸದಂತೆ ನಿಷೇಧ ಹೇರಬೇಕಿದೆ‘ ಎಂದು ಅವರು ಪುನರುಚ್ಛರಿಸಿದರು.
ಇದೇ ವೇಳೆ ದಲಿತ ನಾಯಕ ಕಾನ್ಶೀರಾಂ ಅವರಿಗೆ ಭಾರತ ರತ್ನ ನೀಡುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಹಾಗೆಯೇ, ಉತ್ತರ ಪ್ರದೇಶದ ಮತದಾರರು ರಾಜ್ಯದಲ್ಲಿ ಅಧಿಕಾರವನ್ನು ಬದಲಾಯಿಸುವ ಸಂಬಂಧ ತಮ್ಮ ಮನಸ್ಸುಗಳನ್ನು ಪರಿವರ್ತನೆ ಮಾಡಿಕೊಳ್ಳಬೇಕಿದೆ‘ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.