ADVERTISEMENT

ಇ.ಡಿ ವಿರೋಧಿಗಳನ್ನು ತೊಡೆದು ಹಾಕುವ ಇಲಾಖೆ ಅಲ್ಲ: ಕಾಂಗ್ರೆಸ್

ಸುಪ್ರೀಂ ಕೋರ್ಟ್‌ನ ಮಾತುಗಳಿಗೆ ಕಿವಿಗೊಡುವಂತೆ ಕೇಂದ್ರಕ್ಕೆ ಒತ್ತಾಯ

ಪಿಟಿಐ
Published 17 ಮೇ 2023, 14:28 IST
Last Updated 17 ಮೇ 2023, 14:28 IST
ಜೈರಾಂ ರಮೇಶ್
ಜೈರಾಂ ರಮೇಶ್   

ನವದೆಹಲಿ: ‘ಭಯ ಸೃಷ್ಟಿಸುವ ವಾತಾವರಣ ಸೃಷ್ಟಿಸಬೇಡಿ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ತಾಕೀತು ಮಾಡಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಬುಧವಾರ ವಾಗ್ದಾಳಿ ನಡೆಸಿದೆ.

‘ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನ ಹೇಳಿಕೆಗಳಿಗೆ ಕಿವಿಗೊಡಬೇಕು. ಸುಳ್ಳು ಆರೋಪಗಳನ್ನು ಹೊರಿಸಿ, ಪ್ರತಿಸ್ಪರ್ಧಿ ರಾಜಕೀಯ ಮುಖಂಡರಿಗೆ ಕಿರುಕುಳ ನೀಡುವುದನ್ನು ಕೈಬಿಡುವ ಮೂಲಕ ಸರ್ಕಾರದ ಸಂಪನ್ಮೂಲಗಳನ್ನು ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.

‘ಇ.ಡಿ ಜಾರಿ ನಿರ್ದೇಶನಾಲಯವಾಗಿದೆ. ಅದು ರಾಜಕೀಯ ವಿರೋಧಿಗಳನ್ನು ತೊಡೆದುಹಾಕುವ ಇಲಾಖೆ’ ಅಲ್ಲ ಎಂದೂ ಅವರು ಹೇಳಿದ್ದಾರೆ. 

ADVERTISEMENT

‘ಛತ್ತೀಸಗಢದಲ್ಲಿ ನಡೆದಿದೆ ಎನ್ನಲಾಗಿರುವ ₹2,000 ಕೋಟಿ ಮೊತ್ತದ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಅವರನ್ನು ಸಿಲುಕಿಸಲು ಇ.ಡಿ ಕುತಂತ್ರ ನಡೆಸುತ್ತಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು, ಅವರ ಕುಟುಂಬದ ಸದಸ್ಯರಿಗೆ ಬಂಧನದ ಬೆದರಿಕೆ ಒಡ್ಡುತ್ತಿದೆ’ ಎಂದು ಛತ್ತೀಸಗಢ ಸರ್ಕಾರವು ಆರೋಪಿಸಿತ್ತು. 

ಇದಕ್ಕೆ ಪ್ರತಿಕ್ರಿಯಿಸಿದ್ದ ಸುಪ್ರೀಂ ಕೋರ್ಟ್ ‘ಭಯ ಸೃಷ್ಟಿಸುವ ವಾತಾವರಣ ಕಲ್ಪಿಸಬೇಡಿ’ ಎಂದು ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ತಾಕೀತು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.