ನವದೆಹಲಿ: ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ಗೆ ನೀಡಿರುವ ಹಣಕಾಸು ನೆರವು ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಹೋದರ ಸಂಸದ ಡಿ.ಕೆ.ಸುರೇಶ್ ಅವರಿಗೆಜಾರಿ ನಿರ್ದೇಶನಾಲಯವು ಹೊಸದಾಗಿ ಸಮನ್ಸ್ ಜಾರಿ ಮಾಡಿದೆ.
ಅ.7ರಂದು ಇ.ಡಿ ಕೇಂದ್ರ ಕಚೇರಿಯ ತನಿಖಾಧಿಕಾರಿ ಎದುರು ಹಾಜರಾಗುವಂತೆ ಇಬ್ಬರಿಗೂ ಸೂಚಿಸಿದೆ. ಕರ್ನಾಟಕದಲ್ಲಿ ಭಾರತ್ ಜೋಡೊ ಯಾತ್ರೆ ನಡೆಯುತ್ತಿರುವ ಕಾರಣ ಶಿವಕುಮಾರ್ ಅವರು ತನಿಖಾಧಿಕಾರಿ ಎದುರು ಹಾಜರಾಗಲು ಕಾಲಾವಕಾಶ ಕೇಳುವ ಸಾಧ್ಯತೆ ಇದೆ.
ಶಿವಕುಮಾರ್ ಅವರು ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಇ.ಡಿ ಎದುರು ಹಾಜರಾಗಿದ್ದ ವೇಳೆ, ಯಂಗ್ ಇಂಡಿಯಾಗೆ ನೀಡಿರುವ ಹಣಕಾಸು ನೆರವು ಕುರಿತು ಅಧಿಕಾರಿಗಳು ಮಾಹಿತಿ ಕೇಳಿದ್ದರು.ಚಾರಿಟಬಲ್ ಸಂಸ್ಥೆಯಾದ ಕಾರಣ ಕಂಪನಿಗೆ ಚೆಕ್ ಮೂಲಕ ನಾನು ಮತ್ತು ಸಹೋದರ ದೇಣಿಗೆ ನೀಡಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಶಿವಕುಮಾರ್ ಹೇಳಿದ್ದರು.
ಕಂಪನಿಗೆ ನೀಡಿರುವ ದೇಣಿಗೆ ಕುರಿತ ವಿವರಗಳನ್ನು ತನಿಖಾ ಸಂಸ್ಥೆಗೆ ಶೀಘ್ರ ಸಲ್ಲಿಸುವುದಾಗಿ ಬಳಿಕ ಮಾಧ್ಯಮದವರಿಗೆ ಡಿಕೆಶಿ ಹೇಳಿದ್ದರು.
ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರಮುಖ ಪಾಲುದಾರರಾಗಿರುವ ಸ್ವಯಂ ಸೇವಾ ಸಂಸ್ಥೆ.ಇದನ್ನು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಡೆಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.