ಮುಂಬೈ: ಜಾರಿ ನಿರ್ದೇಶನಾಲಯವು(ಇಡಿ) ರಾಜಕೀಯ ನಾಯಕರಿಗೆಜಾರಿಗೊಳಿಸಿರುವ ನೋಟಿಸ್ ‘ಡೆತ್ ವಾರೆಂಟ್’ ಅಲ್ಲ. ಅದು ‘ಪ್ರೇಮ ಪತ್ರ’ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ಸೋಮವಾರ ವ್ಯಂಗ್ಯವಾಡಿದ್ದಾರೆ.
ಶಿವಸೇನಾ ನಾಯಕ ಮತ್ತು ಮಹಾರಾಷ್ಟ್ರ ಸಚಿವ ಅನಿಲ್ ಪರಬ್ಗೆ ಇ.ಡಿಯು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾವುತ್ ಅವರು,‘ ಮಹಾ ವಿಕಾಸ್ ಆಘಾಡಿ’ಯ (ಎಂವಿಎ) ಬಲಿಷ್ಠ ಗೋಡೆಯನ್ನು ಒಡೆಯುವ ಪ್ರಯತ್ನಗಳು ವಿಫಲವಾದ ನಂತರ ಇಂತಹ ಪ್ರೇಮ ಪತ್ರಗಳ ಸಂಖ್ಯೆಯು ಹೆಚ್ಚಿದೆ’ ಎಂದು ಹೇಳಿದರು.
‘ಬಿಜೆಪಿ ನಾಯಕರು ಪರಬ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಪರಬ್ ಅವರು ನೋಟಿಸ್ಗೆ ಪ್ರತಿಕ್ರಿಯಿಸಲಿದ್ದಾರೆ ಮತ್ತು ಇ.ಡಿಗೆ ಸಹಕರಿಸಲಿದ್ದಾರೆ’ ಎಂದು ರಾವುತ್ ವರದಿಗಾರರಿಗೆ ತಿಳಿಸಿದರು.
ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಸೇರಿದಂತೆ ಇತರರ ವಿರುದ್ಧದ ಇ.ಡಿಯು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯು ಪರಬ್ಗೆ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
‘ಇ.ಡಿ ಕಚೇರಿಯಲ್ಲಿ ಬಿಜೆಪಿಗೆ ಸೇರಿದ ವ್ಯಕ್ತಿ ಕೆಲಸ ಮಾಡುತ್ತಿದ್ದಾರೆ. ಇಲ್ಲವಾದ್ದಲ್ಲಿ ಇ.ಡಿ ಅಧಿಕಾರಿ ಬಿಜೆಪಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.