ADVERTISEMENT

ಮತಾಂತರಕ್ಕೆ ವಿದೇಶಿ ಹಣ ಬಳಕೆ ಆರೋಪ: ದೆಹಲಿ, ಉತ್ತರ ಪ್ರದೇಶದಲ್ಲಿ ಇ.ಡಿ ದಾಳಿ

ಪಿಟಿಐ
Published 3 ಜುಲೈ 2021, 9:32 IST
Last Updated 3 ಜುಲೈ 2021, 9:32 IST
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ   

ನವದೆಹಲಿ: ವಿದೇಶಗಳಿಂದ ಹಣದ ನೆರವು ಪಡೆದು, ಮತಾಂತರಕ್ಕೆ ಬಳಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದೆಹಲಿ ಮತ್ತು ಉತ್ತರ ಪ್ರದೇಶದ ವಿವಿಧ ಸ್ಥಳಗಳಲ್ಲಿ ಶನಿವಾರ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಿವುಡ ವಿದ್ಯಾರ್ಥಿಗಳು ಮತ್ತು ಬಡವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ವಿದೇಶದಿಂದ ಹಣಕಾಸಿನ ನೆರವು ನೀಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿದೆಹಲಿ ಮತ್ತು ಉತ್ತರಪ್ರದೇಶಕ್ಕೆ ಸೇರಿದ ಆರು ಸ್ಥಳಗಳಲ್ಲಿ ಅಧಿಕಾರಿಗಳು ಶೋಧಕಾರ್ಯ ಕೈಗೊಂಡಿದ್ದಾರೆ ಎಂದು ಇವೇ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಕಳೆದ ತಿಂಗಳು ಮತಾಂತರಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ ಎನ್ನಲಾದ ಜಾಲವನ್ನು ಭೇದಿಸಿತ್ತು. ಈ ಸಂಬಂಧ ದೆಹಲಿಯ ಜಾಮಿಯಾ ನಗರದ ಇಬ್ಬರು ನಿವಾಸಿಗಳಾದ ಮುಫ್ತಿ ಖಾಜಿ ಜಹಾಂಗೀರ್‌ ಅಲಂ ಕಸ್ಮಿ ಮತ್ತು ಮೊಹಮ್ಮದ್ ಉಮರ್ ಗೌತಮ್ ಎಂಬುವವರನ್ನು ಬಂಧಿಸಿತ್ತು.

ADVERTISEMENT

ಬಂಧಿತರು, ಇಸ್ಲಾಮಿಕ್‌ ದಾವಾ ಸೆಂಟರ್‌ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದರು. ಪಾಕಿಸ್ತಾನದ ಐಎಸ್‌ಐ ಹಾಗೂ ವಿದೇಶಗಳ ಕೆಲವು ಸಂಸ್ಥೆಗಳಿಂದ ಆರ್ಥಿಕ ನೆರವು ಪಡೆಯುತ್ತಿದ್ದ ಬಂಧಿತರು, ಈ ಹಣವನ್ನು ಮತಾಂತರ ಹಾಗೂ ಇತರ ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದರು ಎಂದು ಎಟಿಎಸ್‌ ಆರೋಪಿಸಿತ್ತು.

ನಂತರ, ತನಿಖೆಯನ್ನು ಕೈಗೆತ್ತಿಕೊಂಡಿರುವ ಇ.ಡಿ., ಈ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.