ನವದೆಹಲಿ: ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಮತ್ತು ನಕಲಿ ಪಾಸ್ಪೋರ್ಟ್ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ಪಂಜಾಬ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಮತ್ತು ಇತರರಿಗೆ ಸೇರಿದ ಕಚೇರಿಗಳು ಮತ್ತು ಮನೆಗಳಮೇಲೆದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಿಗಡ ಸೇರಿದಂತೆ ಹರಿಯಾಣದ ಕೆಲವು ಸ್ಥಳಗಳು ಹಾಗೂ ದೆಹಲಿಯಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯ (ಪಿಎಂಎಲ್ಎ) ನಿಬಂಧನೆಗಳ ಅಡಿಯಲ್ಲಿ ಈ ದಾಳಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಪಿಎಂಎಲ್ಎ ಅಡಿಯಲ್ಲಿ ನಡೆಯುತ್ತಿರುವ ಈ ತನಿಖೆಯು ಮಾದಕವಸ್ತು ಕಳ್ಳಸಾಗಣೆ ಮತ್ತು ನಕಲಿ ಪಾಸ್ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಈ ಪ್ರಕರಣದ ಕೆಲವು ಆರೋಪಿಗಳು ಈಗಾಗಲೇ ಜೈಲಿನಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಸುಖ್ಪಾಲ್ ಸಿಂಗ್ ಖೈರಾ ಅವರು ಪಂಜಾಬ್ ಏಕ್ತಾ ಪಕ್ಷದ ಶಾಸಕ. ಅವರು 2017ರಲ್ಲಿ ಎಎಪಿ ಟಿಕೆಟ್ ಪಡೆದು ರಾಜ್ಯ ವಿಧಾನಸಭೆಗೆ ಆಯ್ಕೆ ಆಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.