ADVERTISEMENT

ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆ: ಅಜಯ್‌ ಮಾಕೆನ್‌ ಆರೋಪ

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸದಸ್ಯ ಅಜಯ್‌ ಮಾಕೆನ್‌ ಆರೋಪ

ಪಿಟಿಐ
Published 11 ಡಿಸೆಂಬರ್ 2025, 16:24 IST
Last Updated 11 ಡಿಸೆಂಬರ್ 2025, 16:24 IST
ಅಜಯ್‌ ಮಾಕೆನ್‌ ರಾಜ್ಯಸಭೆಯಲ್ಲಿ ಮಾತನಾಡಿದರು –ಪಿಟಿಐ ಚಿತ್ರ
ಅಜಯ್‌ ಮಾಕೆನ್‌ ರಾಜ್ಯಸಭೆಯಲ್ಲಿ ಮಾತನಾಡಿದರು –ಪಿಟಿಐ ಚಿತ್ರ   

ನವದೆಹಲಿ: ಚುನಾವಣಾ ಆಯೋಗವು ‘ಸರ್ಕಾರದ ಕೈಗೊಂಬೆ’ಯಾಗಿದೆ ಎಂದು ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಅಜಯ್ ಮಾಕೆನ್ ಗುರುವಾರ ಆರೋಪಿಸಿದರು.

ಚುನಾವಣಾ ವ್ಯವಸ್ಥೆ ಸುಧಾರಣೆ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಇಲ್ಲದಿದ್ದರೆ ಪ್ರಜಾಪ್ರಭುತ್ವವು ಹೇಗೆ ಉಳಿಯುತ್ತದೆ’ ಎಂದು ಪ್ರಶ್ನಿಸಿದರು.

ಜನರ ‘ವಿಶ್ವಾಸ’ ಗಳಿಸುವುದು ಚುನಾವಣಾ ಆಯೋಗ ಮಾಡಬೇಕಿರುವ ಕೆಲಸ. ಆದರೆ ಇಂದು ಅದು ಜನರಲ್ಲಿ ‘ಅನುಮಾನ’ ಹುಟ್ಟುಹಾಕುವ ಕೆಲಸದಲ್ಲಿ ನಿರತವಾಗಿದೆ ಎಂದು ಟೀಕಿಸಿದರು.

ADVERTISEMENT

ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವುದಕ್ಕಿಂತ ಎರಡು ದಿನ ಮುನ್ನ ಬಿಡುಗಡೆ ಮಾಡಿದ ಮತದಾನದ ಅಂಕಿ–ಅಂಶ ಮತ್ತು ಫಲಿತಾಂಶದ ದಿನ ಬಿಡುಗಡೆ ಮಾಡಿದ ಮತದಾನದ ಅಂಕಿ–ಅಂಶದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂಬುದನ್ನು ವಿವರಿಸಿದ ಅವರು ಇದು ಜನರಲ್ಲಿ ಅನುಮಾನ ಮೂಡುವಂತೆ ಮಾಡಿದೆ ಎಂದರು.

ಹೆಚ್ಚುವರಿ ಮತಗಳು ಎಲ್ಲಿಂದ ಬಂದವು ಮತ್ತು ಪ್ರತಿ ಬೂತ್‌ನಲ್ಲಿ ದಾಖಲಾದ ಮತಗಳ ಬಗ್ಗೆ ಮಾಹಿತಿ ಕೇಳಿದಾಗ ಅಯೋಗದ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ದೂರಿದರು.

ಕರ್ನಾಟಕದ ಆಳಂದ‌ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಕಳವು ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ತಂಡದವರು ಕೇಳಿದ ಮಾಹಿತಿಯನ್ನು ಕೂಡಾ ಆಯೋಗವು ಒದಗಿಸುತ್ತಿಲ್ಲ ಎಂದು ಆರೋಪಿಸಿದರು.

ಗೊಂದಲ ಸೃಷ್ಟಿಸುವ ಕಾಂಗ್ರೆಸ್: ಸುಧಾಂಶ

ಅಜಯ್‌ ಮಾಕೆನ್‌ ಆರೋಪಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯ ಸುಧಾಂಶು ತ್ರಿವೇದಿ ‘ಕಾಂಗ್ರೆಸ್ ಪಕ್ಷವು ತನ್ನ ಅನುಮಾನಗಳನ್ನು ಪರಿಹರಿಸಲು ಲಭ್ಯವಿರುವ ಮಾರ್ಗಗಳನ್ನು ಬಳಸಿಕೊಳ್ಳುವ ಬದಲು ಗೊಂದಲ ಸೃಷ್ಟಿಸುತ್ತಿದೆ’ ಎಂದು ಆರೋಪಿಸಿದರು. ಮತದಾನ ನಡೆದು 45 ದಿನಗಳು ಕಳೆದರೂ ಬಿಹಾರ ಚುನಾವಣೆಗೆ ಸಂಬಂಧಿಸಿದ ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಕಾಂಗ್ರೆಸ್ ಏಕೆ ಕೇಳಿಲ್ಲ ಎಂದು ಪ್ರಶ್ನಿಸಿದರು. ಬಿಹಾರದಲ್ಲಿ ‘ಮತ ಕಳವು’ ನಡೆದಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿ ‘ಕಾಂಗ್ರೆಸ್‌ನ ಮತಗಳಿಕೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅಲ್ಲಿ ಕಳವು ಮಾಡಲು ಏನು ಉಳಿದಿದೆ’ ಎಂದು ಕುಟುಕಿದರು. ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ ಆರೋಪಕ್ಕೆ ತಿರುಗೇಟು ನೀಡಿ ‘ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಕಾಂಗ್ರೆಸ್‌ನ 22 ನಾಯಕರು ಮತದಾರರ ಪಟ್ಟಿ ನೀಡುವಂತೆ ಕೋರಿದ್ದರು. ಆದರೆ ಅವುಗಳನ್ನು ನೀಡಲಾಗಿಲ್ಲ ಎಂಬುದನ್ನು ಮಾಧ್ಯಮ ವರದಿಗಳ ಮೂಲಕ ತಿಳಿದುಕೊಂಡೆ. ಪಕ್ಷದ ಚುನಾವಣೆಯಲ್ಲೇ ಪಾರದರ್ಶಕತೆ ಕಾಯ್ದುಕೊಳ್ಳಲು ಕಾಂಗ್ರೆಸ್‌ಗೆ ಆಗಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.