ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಚುನಾವಣಾ ಆಯೋಗ
–ಪಿಟಿಐ ಚಿತ್ರಗಳು
ನವದೆಹಲಿ: ‘ಮತಕಳವು’ ಎನ್ನುವ ಕೆಟ್ಟ ಪದ ಬಳಕೆ ಮಾಡಿ ಸುಳ್ಳು ಸುದ್ದಿ ಹರಡುವ ಬದಲು ಪುರಾವೆ ನೀಡಿ ಎಂದು ಮತದಾರರ ಅಂಕಿಅಂಶ ಕುರಿತು ನಿರಂತರವಾಗಿ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಭಾರತೀಯ ಚುನಾವಣಾ ಆಯೋಗ ಹೇಳಿದೆ.
‘ಒಂದು ವ್ಯಕ್ತಿ ಒಂದು ಮತ’ ಎನ್ನುವ ಕಾನೂನು ಮೊದಲ ಬಾರಿ ಚುನಾವಣೆ ನಡೆದ 1951-1952 ಅವಧಿಯಿಂದಲೇ ಜಾರಿಯಲ್ಲಿದೆ.
ಪುರಾವೆಗಳಿಲ್ಲದೆ ಭಾರತದ ಎಲ್ಲಾ ಮತದಾರರನ್ನು ‘ಕಳ್ಳರು’ ಎಂದು ಬಣ್ಣಿಸುವ ಬದಲು, ಯಾವುದೇ ಚುನಾವಣೆಯಲ್ಲಿ ಒಬ್ಬ ವ್ಯಕ್ತಿ ಎರಡು ಬಾರಿ ಮತ ಚಲಾವಣೆ ಮಾಡುತ್ತಿರುವ ಬಗ್ಗೆ ಯಾರ ಬಳಿಯಾದರೂ ಪುರಾವೆ ಇದ್ದರೆ ಲಿಖಿತ ಪ್ರಮಾಣಪತ್ರವನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
‘ಮತಗಳ್ಳರು’ ಎನ್ನುವ ಕೆಟ್ಟ ಪದವನ್ನು ಬಳಸಿ ದೇಶದ ಕೋಟ್ಯಂತರ ಮತದಾರರನ್ನು ಕಳ್ಳರು ಎಂದು ನೇರವಾಗಿ ಆರೋಪಿಸಿರುವುದು ಮಾತ್ರವಲ್ಲ, ಲಕ್ಷಾಂತರ ಚುನಾವಣಾ ಸಿಬ್ಬಂದಿಯ ಸಮಗ್ರತೆಯ ಮೇಲಿನ ದಾಳಿಯಾಗಿದೆ ಎಂದು ಆಯೋಗ ರಾಹುಲ್ ವಿರುದ್ಧ ಕಿಡಿಕಾರಿದೆ.
ದೇಶದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವಪುರ ಲೋಕಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ್ಳತನವಾಗಿದೆ ಎನ್ನಲಾದ ದಾಖಲೆಗಳನ್ನು ರಾಹುಲ್ ಗಾಂಧಿ ಕಳೆದ ವಾರ ಬಿಡುಗಡೆ ಮಾಡಿದ್ದರು. ಜತೆಗೆ ಬಿಜೆಪಿಯೊಂದಿಗೆ ಆಯೋಗ ಕೈಜೋಡಿಸಿದೆ ಎಂದೂ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.