ADVERTISEMENT

ಕೋವಿಡ್; ಹಬ್ಬಗಳ ಸಂದರ್ಭದಲ್ಲಿ ಜನಸಂದಣಿ ತಪ್ಪಿಸಿ-ರಾಜ್ಯಗಳಿಗೆ ಕೇಂದ್ರದ ಪತ್ರ

ಪಿಟಿಐ
Published 28 ಆಗಸ್ಟ್ 2021, 10:03 IST
Last Updated 28 ಆಗಸ್ಟ್ 2021, 10:03 IST
ಅಜಯ್‌ ಕುಮಾರ್‌ ಭಲ್ಲಾ
ಅಜಯ್‌ ಕುಮಾರ್‌ ಭಲ್ಲಾ   

ನವದೆಹಲಿ: ಕೊರೊನಾ ಸೋಂಕು ಪ್ರಸರಣವನ್ನು ನಿಯಂತ್ರಿಸುವ ಸಂಬಂಧ ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಜನಸಂದಣಿ ಆಗದಂತೆ ಸ್ಥಳೀಯವಾಗಿ ಜಾರಿಗೊಳಿಸಿರುವ ನಿರ್ಬಂಧಗಳ ಬಗ್ಗೆ ಮಾಹಿತಿ ನೀಡುವಂತೆ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಂದ್ರ ಸರ್ಕಾರ ಕೇಳಿದೆ.

ಈ ಕುರಿತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್ ಭಲ್ಲಾ ಅವರು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಳಿತ ಪ್ರದೇಶಗಳ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ‘ಪ್ರಸ್ತುತ ಜಾರಿಯಲ್ಲಿರುವ ಕೋವಿಡ್ -19 ಮಾರ್ಗಸೂಚಿಗಳನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿರುವುದಾಗಿ ಹೇಳಿದ್ದಾರೆ. ಕೆಲವು ರಾಜ್ಯಗಳಲ್ಲಿ ಸ್ಥಳೀಯವಾಗಿ ಸೋಂಕು ಹರಡುತ್ತಿರುವುದನ್ನು ಹೊರತುಪಡಿಸಿದರೆ, ರಾಷ್ಟ್ರೀಯ ಮಟ್ಟದಲ್ಲಿ ಸಾಂಕ್ರಾಮಿಕ ರೋಗದ ಪರಿಸ್ಥಿತಿ ಹೆಚ್ಚು ಸ್ಥಿರವಾಗಿರುವುದಾಗಿ ತೋರುತ್ತಿದೆ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

‘ಕೆಲವು ಜಿಲ್ಲೆಗಳಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತು ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಇಂಥ ಸಮಸ್ಯೆಗಳಿರುವ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು‘ ಎಂದು ಅವರು ಸೂಚಿಸಿದ್ದಾರೆ.

‘ಸೋಂಕು ಉಲ್ಬಣಗೊಳ್ಳುವ ಲಕ್ಷಣಗಳನ್ನು ಮುಂಚಿತವಾಗಿ ಗುರುತಿಸಿ, ಸೋಂಕು ಹರಡುವುದನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಏಪ್ರಿಲ್ 25ರಿಂದ ಜೂನ್ 28ರವರೆಗೆ ಸೂಚಿಸಿರುವ ಸಲಹೆಗಳನ್ನು ಸ್ಥಳೀಯವಾಗಿ ಅನುಷ್ಠಾನಗೊಳಿಸಲು ಪರಿಗಣಿಸಬೇಕಿದೆ‘ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.