ನವದೆಹಲಿ: ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಪರವಾನಗಿ ಪಡೆದ ವ್ಯಾಪಾರಿಗಳಿಗೆ ‘ಹಸಿರು ಪಟಾಕಿ‘ ತಯಾರಿಕೆ, ಸಂಗ್ರಹ ಮತ್ತು ಮಾರಾಟಕ್ಕೆ ನಿರ್ದೇಶನ ನೀಡಲಾಗಿದೆ. ಈ ಕುರಿತು ಗಮನಹರಿಸುವಂತೆ ಎಲ್ಲ ಜಿಲಾಧಿಕಾರಿಗಳು ಮತ್ತು ಪೊಲೀಸರಿಗೆ ದೆಹಲಿ ಸರ್ಕಾರದ ಪರಿಸರ ಖಾತೆ ಸಚಿವ ಗೋಪಲ್ ರೈ ತಿಳಿಸಿದ್ದಾರೆ.
‘ಹಸಿರು ಪಟಾಕಿ’ಗಳು ಇತರೆ ಪಟಾಕಿಗಳಂತೆ ಮಾಲಿನ್ಯಕಾರಕವಲ್ಲ. ಅವುಗಳಲ್ಲಿ ಸಲ್ಫರ್ ಡೈ ಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್ಗಳ ಪ್ರಮಾಣ ಶೇ 30 ರಷ್ಟು ಕಡಿಮೆ ಇರುತ್ತದೆ.
ದೀಪಾವಳಿ ಮತ್ತು ಗುರುಪೂರ್ಣಿಮಾ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಪಟಾಕಿಗಳಿಂದ ಉಂಟಾಗಬಹು ದಾದ ಮಾಲಿನ್ಯ ತಪ್ಪಿಸಲು ದೆಹಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಹಬ್ಬಗಳಂದು ರಾತ್ರಿ 8 ಗಂಟೆಯಿಂದ 10 ಗಂಟೆ ತನಕ ಪಟಾಕಿಗಳನ್ನು ಸಿಡಿಸಬಹುದು. ಕ್ರಿಸ್ಮಸ್ ಮತ್ತು ಹೊಸ ವರ್ಷದಂದು ರಾತ್ರಿ 11.55 ರಿಂದ 12.30 ತನಕ ಪಟಾಕಿ ಸಿಡಿಸಿ, ಸಂಭ್ರಮಿಸಬಹುದು ಎಂದು ಅವರು ಮಾಹಿತಿ ನೀಡಿದರು.
‘ಪರವಾನಗಿ ಪಡೆದ ವ್ಯಾಪಾರಿಗಳು ಮಾತ್ರ ಪಿಇಎಸ್ಒ ನಿಗದಿತ ಮಾನದಂಡಗಳಿಗೆ ಅನುಸಾರವಾಗಿ ಪಟಾಕಿಗಳನ್ನು ಮಾರಾಟ ಮಾಡಬಹುದು. ಇ–ಕಾಮರ್ಸ್ ವೆಬ್ಸೈಟ್ಗಳು ಆನ್ಲೈನ್ ಮೂಲಕ ಬೇಡಿಕೆ ಸ್ವೀಕರಿಸಬಹುದು‘ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ(ಡಿಪಿಸಿಸಿ) ಹೇಳಿದೆ.
ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಡಿಸಿಪಿಗಳು ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು. ನಿತ್ಯ ವರದಿಯನ್ನು ಡಿಪಿಸಿಸಿಗೆ ಸಲ್ಲಿಸಬೇಕು.ಅಲ್ಲದೆ ಡಿಪಿಸಿಸಿಗಳ 11 ವಿಶೇಷ ಪಡೆ ಮತ್ತು ನಗರ ಪೊಲೀಸರಿಗೆಉತ್ಪಾದನಾ ಘಟಕಗಳಲ್ಲಿ ಹಳೆಯ ಪಟಾಕಿಗಳನ್ನು ಸಂಗ್ರಹಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಸೂಚಿಸಲಾಗಿದೆ ಎಂದು ಗೋಪಾಲ್ ರೈ ಹೇಳಿದರು.
2018 ರಲ್ಲಿ ಸುಪ್ರೀಕೋರ್ಟ್ ವಾಯು ಮಾಲಿನ್ಯವನ್ನು ತಡೆಯಲು ಮಾಲಿನ್ಯಕಾರಕ ಪಟಾಕಿಗಳ ಬಳಕೆಯನ್ನು ನಿಷೇಧಿಸಿ, ಹಸಿರು ಪಟಾಕಿಗಳನ್ನು ಬಳಸುವಂತೆ ಆದೇಶಿಸಿತ್ತು.
ದೆಹಲಿ ಸರ್ಕಾರವು ನ.3 ರಿಂದ ಪಟಾಕಿ ವಿರೋಧಿ ಅಭಿಯಾನವನ್ನು ನಡೆಸಲಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.