ಹೈದರಾಬಾದ್: ಎಸ್.ಎಂ.ಕೃಷ್ಣ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮುಜುಗರಕ್ಕೆ ಒಳಗಾಗಿದ್ದ ಪ್ರಸಂಗವನ್ನು ಉಲ್ಲೇಖಿಸಿದ ಬಿಜೆಪಿ ನಾಯಕ ರಾಮ್ಮಾಧವ್ ಟ್ವಿಟರ್ನಲ್ಲಿ ವ್ಯಂಗ್ಯಭರಿತ ವಾಗ್ಬಾಣ ಎದುರಿಸುವಂತಾಗಿದೆ.
ಪಕ್ಷದ ಯುವ ಘಟಕದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘2011ರಲ್ಲಿ ಎಸ್.ಎಂ.ಕೃಷ್ಣ ಬೇರೆ ದೇಶದ ವಿದೇಶಾಂಗ ಸಚಿವರ ಮುದ್ರಿತ ಭಾಷಣ ಓದಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಇಂತಹ ಅನೇಕ ತಮಾಷೆಯ ಪ್ರಸಂಗಗಳೇ ನಡೆದಿದ್ದವು’ ಎಂದು ಹೇಳಿದರು.
‘ಆದರೆ, ಪ್ರಸಕ್ತ ಪ್ರಧಾನಿ ಹಾಗೂ ವಿದೇಶಾಂಗ ಸಚಿವರನ್ನು ವಿಶ್ವವೇ ಗುರುತಿಸಿದೆ. ಭಾರತವನ್ನು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ’ ಎಂದೂ ಹೇಳಿದರು.
ಇದಕ್ಕೆ ಟ್ವೀಟಿಗರು ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ. ‘ಅಂದಿನ ವಿದೇಶಾಂಗ ಸಚಿವ ಕೃಷ್ಣ ಅವರನ್ನು ಬಿಜೆಪಿ ಪಕ್ಷಕ್ಕೆ ಸ್ವಾಗತಿಸಿದೆ’ ಎಂದು ಕೆಲವರು ಟ್ವೀಟ್ ಮಾಡಿದ್ದರೆ, ಇನ್ನೂ ಕೆಲವರು, ಅಮಿತ್ ಶಾ ಜೊತೆ ಎಸ್.ಎಂ.ಕೃಷ್ಣ ಇರುವ ಫೋಟೊ ಹಾಕಿ, ರಾಮ್ ಮಾಧವ್ ಕಾಲೆಳೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.