ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ, ‘ಕೇಜ್ರಿವಾಲ್ ಅವರು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡುವ ಮೂಲಕ ತಮ್ಮ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದೆ.
ಭಾನುವಾರ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ‘ಕೇಜ್ರಿವಾಲ್ ನಿರ್ದೇಶನದ ‘ಲೂಟೇರಾ’ (ಲೂಟಿಕೋರ) ಸಿನಿಮಾ ರಾಷ್ಟ್ರ ರಾಜಧಾನಿಯಲ್ಲಿ ಹಿಂದಿನ ಎಂಟು ವರ್ಷಗಳಿಂದಲೂ ಪ್ರದರ್ಶನ ಕಾಣುತ್ತಿದೆ’ ಎಂದು ಟೀಕಿಸಿದ್ದಾರೆ.
ರಣವೀರ್ ಸಿಂಗ್ ನಟನೆಯ ‘ಲೂಟೇರಾ’ ಸಿನಿಮಾವನ್ನು ಉಲ್ಲೇಖಿಸಿ ಪೋಸ್ಟರ್ವೊಂದನ್ನು ಸಿದ್ಧಪಡಿಸಿರುವ ಬಿಜೆಪಿಯು ಅದರಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ‘ಲೂಟಿಕೋರ’ನನ್ನಾಗಿ ಬಿಂಬಿಸಿದೆ. ಈ ಪೋಸ್ಟರ್ ಅನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
‘ವಂಚಕ ಸುಕೇಶ್ ಚಂದ್ರಶೇಖರ್, ಬಿಜೆಪಿ ನಾಯಕರಂತೆಯೇ ಮಾತನಾಡುತ್ತಿದ್ದಾರೆ. ಹೀಗಾಗಿ ಅವರನ್ನು ಬಿಜೆಪಿಯು ತನ್ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಿ’ ಎಂದು ಕೇಜ್ರಿವಾಲ್ ಕುಟುಕಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪೂನಾವಾಲಾ ಅವರು, ‘ಕೇಜ್ರಿವಾಲ್ ಅಷ್ಟೊಂದು ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ, ಸಚಿವರಾದ ಸತ್ಯೇಂದರ್ ಜೈನ್ ಹಾಗೂ ಕೈಲಾಶ್ ಗಹಲೋತ್ ಅವರೊಂದಿಗೆ ಸುಳ್ಳು ಪತ್ತೆ ಪರೀಕ್ಷೆ ಎದುರಿಸಲಿ. ಆ ಮೂಲಕ ಸುಕೇಶ್ ಮಾಡಿರುವ ಆರೋಪಗಳೆಲ್ಲಾ ಸುಳ್ಳು ಎಂದು ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.