ಜಮ್ಮು/ಶ್ರೀನಗರ: ಶ್ರೀನಗರದಿಂದ ಕಟ್ರಾ ಟೌನ್ಶಿಪ್ಗೆ ಇತ್ತೀಚೆಗೆ ಆರಂಭಗೊಂಡ ವಂದೇ ಭಾರತ್ ರೈಲಿನಲ್ಲಿ ಮೊದಲ ಬಾರಿಗೆ ಪ್ರಯಾಣ ಮಾಡಿದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಭಾವುಕರಾಗಿದ್ದಾರೆ.
ದೇಶದ ರೈಲ್ವೆ ಜಾಲಕ್ಕೆ ಕಾಶ್ಮೀರವು ಕೊನೆಗೂ ಸಂಪರ್ಕ ಪಡೆದಿದ್ದನ್ನು ಕಂಡು ಹೃದಯ ತುಂಬಿ ಬರುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ರೈಲು ಸೇವೆಯನ್ನು ಬಳಸಿಕೊಂಡು ಅಮರನಾಥ ಯಾತ್ರೆಗೆ ಅಧಿಕ ಪ್ರಮಾಣದಲ್ಲಿ ಜನರು ಆಗಮಿಸುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ಧಾರೆ.
ಜುಲೈ 3ರಂದು ವಾರ್ಷಿಕ ಅಮರನಾಥ ಯಾತ್ರೆ ಆರಂಭವಾಗಲಿದೆ.
ಕಾಶ್ಮೀರವನ್ನು ದೇಶದ ರೈಲ್ವೆ ಜಾಲಕ್ಕೆ ಸಂಪರ್ಕಿಸುವ ಉಧಮ್ಪುರ–ಶ್ರೀನಗರ–ಬಾರಾಮುಲ್ಲಾ ನಡುವಿನ 272 ಕಿ.ಮೀ ರೈಲ್ವೆ ಲಿಂಕ್ ಯೋಜನೆ ಪೂರ್ಣಗೊಂಡ ಬಳಿಕ ಜೂನ್ 6ರಂದು ಶ್ರೀನಗರದಿಂದ ಕಟ್ರಾ ಮತ್ತು ಕಟ್ರಾದಿಂದ ಶ್ರೀನಗರಕ್ಕೆ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.
ದುಂಡನೆಯ ಟೋಪಿ ಧರಿಸಿದ್ದ ಫಾರೂಕ್ ಬೆಳಿಗ್ಗೆ ಶ್ರೀನಗರದ ನೌಗಮ್ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಿದ್ದರು. ಕಟ್ರಾದಲ್ಲಿ ಡಿಸಿಎಂ ಸುರಿಂದರ್ ಚೌಧರಿ ಮತ್ತು ಜಮ್ಮು ಎನ್ಸಿ ಅಧ್ಯಕ್ಷ ರತನ್ ಲಾಲ್ ಗುಪ್ತಾ, ಫಾರೂಕ್ ಅಬ್ದುಲ್ಲಾ ಅವರನ್ನು ಬರಮಾಡಿಕೊಂಡರು.
ದೇಶದ ರೈಲ್ವೆ ಜಾಲಕ್ಕೆ ಕೊನೆಗೂ ಕಾಶ್ಮೀರ ಸಂಪರ್ಕ ಪಡೆದುಕೊಡದ್ದನ್ನು ಕಂಡು ನನ್ನ ಹೃದಯ ತುಂಬಿ ಬರುತ್ತಿದ್ದು, ಕಣ್ಣಿರು ಬರುತ್ತಿದೆ. ಇದನ್ನು ಸಾಕಾರಗೊಳಿಸಿದ ಎಂಜಿನಿಯರ್ಗಳು ಮತ್ತು ಕಾರ್ಮಿಕರನ್ನು ಅಭಿನಂದಿಸುತ್ತೇನೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಪ್ರಯಾಣದ ಅವಧಿಯನ್ನು ಈ ರೈಲು ಸೇವೆ ತಗ್ಗಿಸಲಿದೆ. ವ್ಯಾಪಾರ ಮತ್ತು ಪ್ರವಾಸೋದ್ಯಮ ಉತ್ತೇಜಿಸುವುದರಿಂದ ಇದೊಂದು ದೊಡ್ಡ ಗೆಲುವಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಪುತ್ರರಾದ ಜಮೀರ್ ಮತ್ತು ಜಹೀರ್, ಜಮ್ಮು-ಕಾಶ್ಮೀರದ ಸಚಿವ ಸತೀಶ್ ಶರ್ಮಾ, ಮುಖ್ಯಮಂತ್ರಿ ಸಲಹೆಗಾರ ನಾಸಿರ್ ಅಸ್ಲಾಂ ವಾನಿ ಮತ್ತು ರಾಷ್ಟ್ರೀಯ ಸಮ್ಮೇಳನದ ಮುಖ್ಯ ವಕ್ತಾರ ತನ್ವೀರ್ ಸಾದಿಕ್ ಕೂಡ ಅಬ್ದುಲ್ಲಾ ಅವರ ಜೊತೆ ರೈಲು ಪ್ರಯಾಣದಲ್ಲಿದ್ದರು.
ಶ್ರೀನಗರದಿಂದ ಕಟ್ರಾಗೆ ನಮ್ಮ ಮೊದಲ ರೈಲು ಪ್ರಯಾಣ ನಿಜಕ್ಕೂ ಪ್ರಭಾವಿತವಾಗಿತ್ತು! ರೈಲು ಐಕಾನಿಕ್ ಅಂಜಿ ಸೇತುವೆಯನ್ನು ದಾಟಿ ಅದ್ಭುತ ಸುರಂಗಗಳ ಮೂಲಕ ಸಾಗಿದ್ದು. ಗಮನಾರ್ಹ ಅನುಭವ ಎಂದು ಸಾದಿಕ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಪ್ರಯಾಣದ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
ಕಾಶ್ಮೀರದಿಂದ ತೋಟಗಾರಿಕೆ ಉತ್ಪನ್ನಗಳನ್ನು ದೂರದ ಕನ್ಯಾಕುಮಾರಿ, ಮುಂಬೈ, ಕೋಲ್ಕತ್ತ ಮತ್ತು ಬಿಹಾರ ಸೇರಿದಂತೆ ದೇಶದ ವಿವಿಧ ಮಾರುಕಟ್ಟೆಗಳಿಗೆ ಸಾಗಿಸಲು ಈ ರೈಲು ಸಹಾಯಕವಾಗಿದೆ ಎಂದು ಅಬ್ದುಲ್ಲಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.