ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ವಾಸ್ತವ ಗಡಿ ರೇಖೆ ಬಳಿ ಬಂದಿದ್ದ ಚೀನಾದ ಸೈನಿಕರಿಗೆ ಭಾರತೀಯ ಯೋಧರು ಪ್ರತಿರೋಧ ತೋರಿದ್ದು, ಎರಡೂ ಕಡೆಯವರ ನಡುವೆ ಡಿಸೆಂಬರ್ 9ರಂದು ಕಾದಾಟ ನಡೆದಿದೆ.
ಘಟನೆಯಲ್ಲಿ ಎರಡೂ ಕಡೆಯ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘರ್ಷಣೆಯ ನಂತರ ಭಾರತ ಮತ್ತು ಚೀನಾದ ಪೀಪಲ್ ಲಿಬರೇಷನ್ ಆರ್ಮಿಯ ಸೈನಿಕರೂ ಸ್ಥಳದಿಂದ ನಿರ್ಗಮಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ಸೋಮವಾರ ವರದಿ ಮಾಡಿದೆ.
ಘಟನೆಯ ಹಿನ್ನೆಲೆಯಲ್ಲಿ ತವಾಂಗ್ನ ಭಾರತದ ಸೇನಾ ಕಮಾಂಡರ್ ಚೀನಾದ ಸೇನಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಸಂಘರ್ಷ ನಡೆದ ಪ್ರದೇಶದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯವಿಧಾನಗಳನ್ನು ಅನುಸರಿಸಿದ್ದಾರೆ.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ವಾಸ್ತವ ಗಡಿ ರೇಖೆಯುದ್ಧಕ್ಕೂ ಕೆಲವು ವಿವಾದಿತ ಪ್ರದೇಶಗಳಿವೆ. ಎರಡೂ ಕಡೆಯವರು ತಮ್ಮ ನಿಯಂತ್ರಣದಲ್ಲಿರುವ ಪ್ರದೇಶಗಳ ಅಂಚಿನ ವರೆಗೆ ಗಸ್ತು ತಿರುಗುತ್ತಾರೆ. 2006ರಿಂದ ಈ ಪ್ರವೃತ್ತಿ ನಡೆಯುತ್ತಲೇ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.