ತಿರುವನಂತಪುರ: ಸಿಪಿಎಂ ರಾಷ್ಟ್ರೀಯ ನಾಯಕರು ಸೇರಿದಂತೆ ವಿವಿಧ ಸ್ತರಗಳಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಪೊಲೀಸ್ ಕಾಯ್ದೆಯ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಅನುಷ್ಠಾನಗೊಳಿಸದಿರಲು ಆಡಳಿತಾರೂಢ ಎಡರಂಗ ಸರ್ಕಾರ ನಿರ್ಧರಿಸಿದೆ.
ಕಾಯ್ದೆಯಲ್ಲಿ 118–ಎ ಎಂಬ ಹೊಸ ಸೆಕ್ಷನ್ ಸೇರ್ಪಡೆಗೊಳಿಸಿದ್ದ ಸರ್ಕಾರವು ಸಾಮಾಜಿಕ ಮಾಧ್ಯಮ ಸೇರಿದಂತೆ ಯಾವುದೇ ಮಾಧ್ಯಮದ ಮುಖಾಂತರ ವ್ಯಕ್ತಿಯೊಬ್ಬರ ಮಾನಹಾನಿ ಮಾಡಿದರೆ ಅಥವಾ ಬೆದರಿಸಿದರೆ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ₹10 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಕೊಡುವ ತಿದ್ದುಪಡಿ ತಂದಿತ್ತು.
ಈ ತಿದ್ದುಪಡಿ ಸುಗ್ರೀವಾಜ್ಞೆಗೆ ಕೇರಳದ ರಾಜ್ಯಪಾಲರು ಶನಿವಾರ ಸಹಿ ಮಾಡಿದ್ದರು.
‘ಎಲ್ಡಿಎಫ್ಗೆ ಬೆಂಬಲ ನೀಡಿರುವವರು ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲು ಬದ್ಧತೆ ಹೊಂದಿರುವವರು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಸರ್ಕಾರವು ಕೇರಳ ಪೊಲೀಸ್ ಕಾಯ್ದೆಯಲ್ಲಿನ ತಿದ್ದುಪಡಿಯನ್ನು ಅನುಷ್ಠಾನಕ್ಕೆ ತರದಿರಲು ನಿರ್ಧರಿಸಿದೆ. ವಿಧಾನಸಭೆ ಹಾಗೂ ಸಮಾಜದ ಎಲ್ಲ ವಲಯದ ಸಲಹೆಗಳನ್ನು ಸಂಗ್ರಹಿಸಿ ವಿಸ್ತೃತವಾಗಿ ಚರ್ಚಿಸಿದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯಲು ಈ ತಿದ್ದುಪಡಿಯನ್ನು ತರಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದ್ದರೂ, ಸುಗ್ರೀವಾಜ್ಞೆಯಲ್ಲಿ ‘ಯಾವುದೇ ಮಾದರಿಯ ಸಂವಹನ’ ಎನ್ನುವ ಪ್ರಸ್ತಾಪವಿದ್ದ ಕಾರಣ, ಮಾಧ್ಯಮ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸರ್ಕಾರ ಈ ತಿದ್ದುಪಡಿ ತಂದಿದೆಎನ್ನುವ ವಿರೋಧ ವ್ಯಕ್ತವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.