ಅಮೃತ್ಸರ: ಒಂದೇ ಬಾರಿಗೆ ಎರಡು ತಿಂಗಳ ಸಂಬಳ ನಮ್ಮ ಬ್ಯಾಂಕ್ ಖಾತೆಗೆ ಜಮಾ ಆದರೆ ಹೇಗಿರಬಹುದು? ಹೌದು, ಇಂತಹದ್ದೊಂದು ಸಂತೋಷದ ಅನುಭವ ಪಂಜಾಬ್ ರಾಜ್ಯದ ಸರ್ಕಾರಿ ನೌಕರರಿಗೆ ಆಯಿತು. ಆದರೆ, ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ!
ಅಕ್ಟೋಬರ್ ತಿಂಗಳಲ್ಲಿ ಎಂದಿನ ತಮ್ಮ ವೇತನದ ದುಪ್ಪಟ್ಟು ಹಣ ಖಾತೆಗೆ ಬಂದದ್ದನ್ನು ಕಂಡ ಉದ್ಯೋಗಿಗಳು, ಇದು ದೀಪಾವಳಿ ಹಬ್ಬಕ್ಕೆ ಸರ್ಕಾರ ತಮಗೆ ನೀಡಿರುವ ಉಡುಗೊರೆ ಎಂದೇ ಭಾವಿಸಿದ್ದರು. ಆದರೆ, ಈ ಹಣ ತಪ್ಪಾಗಿ ಜಮಾ ಆಗಿದ್ದು, ಹೆಚ್ಚುವರಿ ಹಣವನ್ನು ಖಾತೆಗಳಿಂದ ತೆಗೆಯಬಾರದು ಎಂದು ನೌಕರರಿಗೆ ಮಾಹಿತಿ ರವಾನಿಸಲಾಯಿತು.
ಜಿಲ್ಲಾ ಖಜಾನೆ ಅಧಿಕಾರಿ ಎ.ಕೆ.ಮಿಯಾನಿ ಅವರು, ಎಲ್ಲಾ ಸರ್ಕಾರಿ ಕಚೇರಿ ಅಧಿಕಾರಿಗಳಿಗೆ ನೋಟಿಸ್ ಮೂಲಕ ಮಾಹಿತಿ ನೀಡಿ, ‘ಖಜಾನೆ ಇಲಾಖೆಯ ಸಾಫ್ಟ್ವೇರ್ನಲ್ಲಾದ ತಾಂತ್ರಿಕ ದೋಷದಿಂದ ಎರಡು ತಿಂಗಳ ವೇತನ ಪಾವತಿಯಾಗಿದೆ. ಹೀಗಾಗಿ, ಅದನ್ನು ಹಿಂದಕ್ಕೆ ಪಡೆಯಲಾಗುವುದು’ ಎಂದು ದೃಢಪಡಿಸಿದರು. ಅಮೃತಸರ ಜಿಲ್ಲೆಯೊಂದರಲ್ಲೇ ₹40ರಿಂದ ₹50 ಕೋಟಿ ಹೆಚ್ಚುವರಿ ಸಂಬಳ ನೌಕರರ ಖಾತೆಗೆ ಪಾವತಿಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.