ನವದೆಹಲಿ: ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ದೇಶದಾದ್ಯಂತ ₹ 2 ಕೋಟಿಗೂ ಅಧಿಕ ಮೊತ್ತವನ್ನು ವಂಚಿಸಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಅಭಿಯಾನದ(ಆರ್ಜೆಎಸ್ಎಮ್) ಅಧಿಕಾರಿ ಎಂದು ನಂಬಿಸಿ ಹಲವು ವರ್ತಕರಿಗೆ ಆರೋಪಿಯು ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
‘ಆರೋಪಿಯನ್ನು ಸೌರಭ್ ಸಿಂಗ್ ಎಂದು ಗುರುತಿಸಲಾಗಿದೆ. ಐಎಎಸ್ ಅಧಿಕಾರಿ ಎಂದು ವ್ಯಾಪಾರಿಗಳಿಗೆ ನಂಬಿಸಿ, ಆರ್ಜೆಎಸ್ಎಮ್ ಹೆಸರಿನ ಲೆಟರ್ಹೆಡ್, ನಕಲಿ ವೆಬ್ಸೈಟ್ ಹಾಗೂ ನಕಲಿ ಟ್ರಸ್ಟ್ ಮೂಲಕ ಬಡ ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಕೆ ಮಾಡುವುದಕ್ಕೆ ವರ್ತಕರ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಸಮವಸ್ತ್ರ ಪೂರೈಕೆ ಮಾಡುವ ಟೆಂಡರ್ ನೀಡಲು ಕೂಡ ಕಮಿಷನ್ ಪಡೆದಿದ್ದಾರೆ. ಆರೋಪಿಯ ಬಳಿ ₹ 1.5 ಕೋಟಿ ಮೌಲ್ಯದ 45 ಸಾವಿರ ಸಮವಸ್ತ್ರಗಳು, ₹ 2,79 ಲಕ್ಷ ನಗದು, ಬಂಗಾರದ ಆಭರಣಗಳು ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಛತ್ತೀಸಗಢದಲ್ಲಿ ಆರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.