ನವದೆಹಲಿ: ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಮಹಿಳೆ ಸೇರಿದಂತೆ ಇಬ್ಬರು ವ್ಯಕ್ತಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್, ‘ಎಫ್ಐಆರ್ನಲ್ಲಿ ವೈವಾಹಿಕ ವಿವಾದಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತಿ ಹಾಗೂ ಆತನ ಕುಟುಂಬಸ್ಥರ ಬಗ್ಗೆ ಕೇವಲ ಪ್ರಾಸಂಗಿಕ ಉಲ್ಲೇಖ ಮಾಡಲಾಗಿದೆ’ ಎಂದು ಹೇಳಿದೆ.
ಈ ಪ್ರಕರಣ ಸಂಬಂಧ ನೀಡಿದ್ದ ತೀರ್ಪನ್ನುನ್ಯಾಯಮೂರ್ತಿಗಳಾದ ಆರ್. ಸುಭಾಷ್ ರೆಡ್ಡಿ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠವು ಅಸಿಂಧುಗೊಳಿಸಿದೆ.
ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಗಳಾದ ಸಂತ್ರಸ್ತೆಯ ಸೋದರ ಮಾವ ಮತ್ತು ಅತ್ತೆಗೆ ಪೊಲೀಸರಿಗೆ ಶರಣಾಗತಿಯಾಗುವಂತೆ ಈ ಹಿಂದೆಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿತ್ತು.
‘ಎಫ್ಐಆರ್ನಲ್ಲಿ ಸಂತ್ರಸ್ತೆಯ ಗಂಡನ ಕುಟುಂಬದ ಹಲವು ಸದಸ್ಯರ ಹೆಸರುಗಳನ್ನು ಕೇವಲ ಪ್ರಾಸಂಗಿಕವಾಗಿ ಉಲ್ಲೇಖಿಸಲಾಗಿದೆಯೇ ಹೊರತು ಅಪರಾಧದಲ್ಲಿ ಅವರ ಸಕ್ರಿಯ ಪಾತ್ರವನ್ನು ವಿವರಿಸಲಾಗಿಲ್ಲ. ಹೀಗಿರುವಾಗ ಅವರ ವಿರುದ್ಧ ಕ್ರಮಕೈಗೊಳ್ಳುವುದು ಸರಿಯಲ್ಲ. ಇದು ನ್ಯಾಯಬದ್ಧ ಪ್ರಕ್ರಿಯೆ ಅಲ್ಲ’ ಎಂದು ಪೀಠ ಹೇಳಿದೆ.
‘ಸಂತ್ರಸ್ತೆಯ ತಂದೆ ದಾಖಲಿಸಿರುವ ದೂರಿನಲ್ಲಿ ಕುಟುಂಬಸ್ಥರು ಅಪರಾಧದಲ್ಲಿ ಭಾಗಿಯಾಗಿರುವ ಕುರಿತಾಗಿ ನಿಖರ ಮಾಹಿತಿ ನೀಡಿಲ್ಲ. ಅಲ್ಲದೇ, ದೂರಿನಲ್ಲಿ ಸಂತ್ರಸ್ತೆ ಮೈ ಮೇಲೆ ಹಲವು ಗಾಯಗಳಿದ್ದವು ಎಂದು ಹೇಳಲಾಗಿದೆ. ಆದರೆ ಆಂತರಿಕ ಗಾಯವೊಂದನ್ನು ಹೊರತುಪಡಿಸಿ ದೇಹದಲ್ಲಿ ಬೇರೆ ಯಾವುದೇ ಗಾಯಗಳು ಪತ್ತೆಯಾಗಿಲ್ಲ’ ಎಂದು ಹೇಳಿದೆ.
‘ವರದಕ್ಷಿಣೆಗಾಗಿ ತನ್ನ ಮಗಳಿಗೆ ಆಕೆಯ ಪತಿ, ಸೋದರ ಮಾವ, ನಾದಿನಿ, ಅತ್ತೆ ಕಿರುಕುಳ ನೀಡುತ್ತಿದ್ದರು. ಥಳಿಸುತ್ತಿದ್ದರು. ತಮ್ಮ ಬೇಡಿಕೆ ಈಡೇರಿಸದಿದ್ದರೆ ಕೊಲ್ಲುವುದಾಗಿಯೂ ಬೆದರಿಕೆಯೊಡ್ಡಿದ್ದರು. 2018ರ ಜುಲೈ 24ರಂದು ರಾತ್ರಿ 8 ಗಂಟೆಗೆ ಇದೇ ಕಾರಣಕ್ಕಾಗಿ ತನ್ನ ಮಗಳನ್ನು ಥಳಿಸಿದ್ದಾರೆ. ಬಳಿಕ ಆಕೆಯ ಕುತ್ತಿಗೆ ನೇಣು ಬಿಗಿದು, ಹತ್ಯೆಗೈದಿದ್ದಾರೆ ಎಂದುಸಂತ್ರಸ್ತೆಯ ತಂದೆ ಜುಲೈ 25, 2018ರಲ್ಲಿಗೋರಖ್ಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.