ಜೋದ್ಪುರ: ಕಳ್ಳ ಬೇಟೆಗಾರರು ಜಿಂಕೆ ಕೊಲ್ಲಲು ಹೊರಟಾಗ ಅದನ್ನು ರೈತರೊಬ್ಬರು ತಡೆಯಲು ಮುಂದಾದರು. ಆಗ ಶಿಕಾರಿಗಳು ಹರಿತವಾದ ಆಯುಧದಿಂದ ದಾಳಿ ನಡೆಸಿದ್ದು, ಆಸ್ಪತ್ರೆಯಲ್ಲಿ ಆ ರೈತ ಮೃತಪಟ್ಟಿದ್ದಾರೆ. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಡಾಂಗ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹತ್ಯೆಯ ನಂತರ ಆಕ್ರೋಶಗೊಂಡ ಸ್ಥಳೀಯರು ಆರೋಪಿಗೆ ಸೇರಿದ ಅಂಗಡಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಡಾಂಗ್ರಿ ಗ್ರಾಮದ ತಮ್ಮ ಹೊಲದಲ್ಲಿಯೇ 50 ವರ್ಷದ ಖೇತ್ ಸಿಂಗ್ ಅವರು ಮಂಗಳವಾರ ರಾತ್ರಿ ನಿದ್ದೆ ಮಾಡುತ್ತಿದ್ದರು. ಈ ವೇಳೆ ಕಳ್ಳ ಬೇಟೆಗಾರರಾದ ಲಾಡೂ ಖಾನ್, ಆಲಂ ಖಾನ್ ಹಾಗೂ ಖೇತೆ ಖಾನ್ ಜಿಂಕೆ ಬೇಟೆಯಾಡುತ್ತಿದ್ದನ್ನು ಗಮನಿಸಿ ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಮೂವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾಗಿ ರಾತ್ರಿಯಿಡೀ ಹೊಲದಲ್ಲೇ ನರಳುತ್ತಿದ್ದ ಖೇತ್ ಅವರನ್ನು ಮರುದಿನ ಬೆಳಿಗ್ಗೆ ಗ್ರಾಮಸ್ಥರು ಗಮನಿಸಿ ಫತೇರ್ಗಢದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೂ ಅವರು ಬದುಕುಳಿಯಲಿಲ್ಲ’ ಎಂದು ಜೈಸಲ್ಮೇರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಶಿವ್ಹಾರೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.