ADVERTISEMENT

ರೈತರ ಪ್ರತಿಭಟನೆ: ದೆಹಲಿಯ ಗಡಿ ಭಾಗಗಳಲ್ಲಿ 2 ದಿನ ಅಂತರ್ಜಾಲ ಸೇವೆ ಸ್ಥಗಿತ

ಏಜೆನ್ಸೀಸ್
Published 30 ಜನವರಿ 2021, 9:22 IST
Last Updated 30 ಜನವರಿ 2021, 9:22 IST
ಪ್ರತಿಭಟನಾ ನಿರತ ರೈತರು
ಪ್ರತಿಭಟನಾ ನಿರತ ರೈತರು   

ನವದೆಹಲಿ: ದೆಹಲಿಯ ಗಡಿ ಪ್ರದೇಶಗಳಲ್ಲಿ ಎರಡು ದಿನ ಅಂತರ್ಜಾಲ ಸೇವೆಗಳನ್ನು ಕಡಿತಗೊಳಿಸುತ್ತಿರುವುದಾಗಿ ಕೇಂದ್ರ ಗೃಹ ಇಲಾಖೆ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರದ ಹೊಸ ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಎರಡು ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು, ಗಾಜಿಪುರ್ ಹಾಗೂ ಟಿಕ್ರಿ ಪ್ರದೇಶಗಳಲ್ಲಿ ಅಂತರ್ಜಾಲ ಸೇವೆಗಳನ್ನು ಕಡಿತಗೊಳಿಸಲಾಗಿದೆ.

ಜನವರಿ 29ರ ರಾತ್ರಿ 11ರಿಂದ ಜನವರಿ 31ರ ರಾತ್ರಿ 11ರ ವರೆಗೂ ತಾತ್ಕಾಲಿಕವಾಗಿ ಅಂತರ್ಜಾಲ ಸೇವೆಗಳನ್ನು ಕಡಿತಗೊಳಿಸುವುದು ಅವಶ್ಯವಿರುವುದರಿಂದ ಆದೇಶ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಲಕ್ಷಾಂತರ ಜನರು ದೆಹಲಿಯ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೊರೆಯುವ ಚಳಿ, ಮಳೆಯಲ್ಲಿಯೂ ಹೋರಾಟ ಮುಂದುವರಿಸಿದ ರೈತ ಸಂಘಟನೆಗಳಿಗೆ ಜನವರಿ 26ರಂದು ನಡೆದ ಘರ್ಷಣೆಯಿಂದಾಗಿ ಗೊಂದಲದ ಸ್ಥಿತಿ ಎದುರಾಗಿದೆ. ಟ್ರ್ಯಾಕ್ಟರ್‌ ರ್‍ಯಾಲಿ ನಡೆದ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ಉಂಟಾಗಿ ಹಲವು ಮಂದಿ ಗಾಯಗೊಂಡರು, ಒಬ್ಬ ರೈತ ಸಾವಿಗೀಡಾದರು.

ಪ್ರತಿಭಟನೆ ಕೈಬಿಡುವಂತೆ ಸ್ಥಳೀಯರು, ಸ್ಥಳೀಯ ಆಡಳಿತ ಹಾಗೂ ಕೇಂದ್ರ ಸರ್ಕಾರ ರೈತರ ಮೇಲೆ ಒತ್ತಡ ಹೇರುತ್ತಿವೆ. ಆದರೆ, ರೈತ ಸಂಘಟನೆಗಳು ಹೋರಾಟವನ್ನು ಮತ್ತಷ್ಟು ವಿಸ್ತರಿಸುವುದಾಗಿ ಕರೆ ಕೊಟ್ಟಿವೆ. ಈ ನಡುವೆ ರೈತರಿಗೆ ನೀರು, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗಿದೆ ಎಂದು ಆರೋಪ ಕೇಳಿಬರುತ್ತಿವೆ. ಪರಿಸ್ಥಿತಿ ನಿಯಂತ್ರಿಸುವ ಕಾರಣವನ್ನು ನೀಡಿ ಕೇಂದ್ರ ಸರ್ಕಾರ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.