ಚಂಡೀಗಢ: ತಾವು ಬೆಳೆದ ಬೆಳೆಗಳು ಪ್ರವಾಹದಲ್ಲಿ ಹಾನಿಗೀಡಾಗಿರುವಾಗ, ರೈತರಿಗೆ ಬಿತ್ತನೆ ಬೀಜಗಳನ್ನು ಉಚಿತವಾಗಿ ನೀಡುವ ಮೂಲಕ ಪಂಜಾಬ್ನ ರೈತರು ಹಲವಾರು ರೈತರಿಗೆ ಆಸರೆಯಾಗುತ್ತಿದ್ದಾರೆ.
ರೈತ ಬಲದೇವ್ ಸಿಂಗ್ ಜಲಂಧರ್ ಜಿಲ್ಲೆಯ ಶಾಹಕೋಟ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದರು. ಪ್ರವಾಹದಲ್ಲಿ ಸಿಕ್ಕಿ ಬೆಳೆ ಹಾನಿಯಾಗಿದೆ. ಆದರೂ ಅವರು, ಪ್ರವಾಹ ಪೀಡಿತ ಪ್ರದೇಶದ ರೈತರಿಗೆ ಅಲ್ಪಾವಧಿಯ ಆರ್ಆರ್ 126 ತಳಿಯ ಬಿತ್ತನೆ ಬೀಜ ಭತ್ತವನ್ನು ಉಚಿತವಾಗಿ ನೀಡುತ್ತಿದ್ದಾರೆ.
‘ನನ್ನ ಬಳಿ 70ರಿಂದ 80 ಕ್ವಿಂಟಲ್ ಪಿಆರ್ 126 ತಳಿಯ ಬಿತ್ತನೆ ಬೀಜ ಭತ್ತವಿದ್ದು, ಪ್ರವಾಹ ಪೀಡಿತ ರೈತರಿಗೆ ಉಚಿತವಾಗಿ ನೀಡುತ್ತಿದ್ದೇನೆ’ ಎಂದು ಶಾಹಕೋಟ್ನ ಗಟ್ಟಿ ರಾಯ್ಪುರ ಗ್ರಾಮದ ಬಲದೇವ್ ಸಿಂಗ್ ಸುದ್ದಿಸಂಸ್ಥೆ ತಿಳಿಸಿದರು.
ಕಳೆದ ವಾರ ರಾಜ್ಯವನ್ನು ಪೀಡಿಸಿದ ಪ್ರವಾಹದಲ್ಲಿ ಬಲದೇವ್ ಸಿಂಗ್ ಅವರು 50ರಿಂದ 60 ಎಕರೆಗಳಲ್ಲಿ ಬೆಳೆದ ಭತ್ತದ ಬೆಳೆಯನ್ನು ಕಳೆದುಕೊಂಡಿದ್ದಾರೆ.
ಬಲದೇವ್ ಸಿಂಗ್ ಅವರಂತೆ ಅನೇಕ ರೈತರು, ರೈತ ಸಂಘಗಳು ಸಹ ಪಂಜಾಬ್ನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬೆಳೆಗಾರರಿಗೆ ಮರು ನಾಟಿ ಮಾಡಲು ಭತ್ತದ ಸಸಿಗಳನ್ನು ಉಚಿತವಾಗಿ ಒದಗಿಸಲು ಭತ್ತದ ನರ್ಸರಿಗಳನ್ನು ಸ್ಥಾಪಿಸುವ ಆಲೋಚನೆಯೊಂದಿಗೆ ಮುಂದೆ ಬಂದಿವೆ.
ಪ್ರವಾಹ ಕಾಣಿಸದ ಮುಕ್ತಸರ್ ಜಿಲ್ಲೆಯ ರೈತ ಕುಲ್ವೀರ್ ಸಿಂಗ್ ಅವರು ಪಿಬಿ 1629 ಬಾಸ್ಮತಿ ತಳಿಯ ನಾಲ್ಕು ಕ್ವಿಂಟಲ್ಗಿಂತಲೂ ಹೆಚ್ಚಿನ ಬಿತ್ತನೆ ಬೀಜವನ್ನು ಹಲವು ಬೆಳೆಗಾರರಿಗೆ ಉಚಿತವಾಗಿ ಪೂರೈಸಿದ್ದಾರೆ.
‘ಪ್ರವಾಹ ಪೀಡಿತ ಪ್ರದೇಶದ ರೈತರಿಗೆ ಈಗಾಗಲೇ 1,000 ಕ್ವಿಂಟಲ್ ಬಿತ್ತನೆ ಬೀಜ ನೀಡಿದ್ದೇವೆ. 3,000 ಕ್ವಿಂಟಲ್ ಭತ್ತದ ಬೀಜ ನೀಡುವ ಗುರಿ ಇದೆ’ ಎಂದು ಸರ್ಕಾರಿ ಸ್ವಾಮ್ಯದ ಪುನ್ಸೀಡ್ (ಪಂಜಾಬ್ ರಾಜ್ಯ ಬೀಜ ನಿಗಮ) ಅಧ್ಯಕ್ಷ ಮೊಹಿಂದರ್ ಸಿಂಗ್ ಸಿಧು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.