ADVERTISEMENT

ಮೇ 4ರಂದು ರೈತ ಮುಖಂಡರೊಂದಿಗೆ ನಿಗದಿಯಾಗಿದ್ದ ಸಭೆ ಮುಂದೂಡಿದ ಕೇಂದ್ರ

ಪಿಟಿಐ
Published 2 ಮೇ 2025, 2:46 IST
Last Updated 2 ಮೇ 2025, 2:46 IST
   

ಚಂಡೀಗಢ: ಮೇ 4ರಂದು ರೈತ ಮುಖಂಡರೊಂದಿಗೆ ನಡೆಯಬೇಕಿದ್ದ ಸಭೆಯನ್ನು ಕೇಂದ್ರ ಸರ್ಕಾರ ಗುರುವಾರ ಮುಂದೂಡಿದೆ. ಅಲ್ಲದೇ ಪಂಜಾಬ್ ಸರ್ಕಾರದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಒತ್ತಾಯಿಸಿದೆ.

ಈ ಸಂಬಂಧ ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಪೂರಣ್ ಚಂದ್ರ ಕಿಶನ್ ಅವರು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾಗೆ (ಕೆಎಂಎಂ)ಗೆ ಪತ್ರ ಬರೆದಿದ್ದಾರೆ.

ಪಂಜಾಬ್ ಸರ್ಕಾರದ ಪ್ರತಿನಿಧಿಗಳನ್ನು ಆಹ್ವಾನಿಸಿದರೆ ಸಭೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ರೈತ ಮುಖಂಡ ಜಗಜೀತ್ ಸಿಂಗ್‌ ಡಲ್ಲೇವಾಲ್ ಹೇಳಿದ ಕೆಲ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.

ADVERTISEMENT

ಏಪ್ರಿಲ್ 27ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ, ಪ್ರಸ್ತಾವಿತ ಸಭೆಯಲ್ಲಿ ಪಂಜಾಬ್ ಸರ್ಕಾರದ ಪ್ರತಿನಿಧಿಗಳನ್ನು ಸೇರಿಸಿಕೊಳ್ಳದಂತೆ ಮನವಿ ಮಾಡಿದ್ದರು.

ಈ ಸಂಬಂಧ ಗುರುವಾರದ ಪತ್ರದ ಮೂಲಕ ಪ್ರತಿಕ್ರಿಯಿಸಿದ ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಕಿಶನ್, 'ನಿಮಗೆ ತಿಳಿದಿರುವಂತೆ, ರಾಜ್ಯ ಸರ್ಕಾರಗಳು ಒಕ್ಕೂಟ ರಚನೆಯಲ್ಲಿ ಪ್ರಮುಖ ಪಾತ್ರ ಹೊಂದಿವೆ. ಆದ್ದರಿಂದ, ಸಭೆಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳಿರುವುದು ಸೂಕ್ತ. ಅವರನ್ನು ಹೊರಗಿಡುವ ನಿಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಿಮ್ಮನ್ನು ವಿನಂತಿಸುತ್ತೇನೆ. ಈ ಬಗ್ಗೆ ಚರ್ಚಿಸಿ, ಅವರನ್ನೂ ಒಳಗೊಂಡ ಸಭೆಗೆ ನಿಮ್ಮ ಒಪ್ಪಿಗೆ ನೀಡಬೇಕು. ಸದ್ಯ ಮೇ 4ರಂದು ನಿಗದಿಯಾಗಿದ್ದ ಸಭೆಯನ್ನು ಮುಂದೂಡಲಾಗಿದೆ. ನಿಮ್ಮಿಂದ ಮಾಹಿತಿ ಪಡೆದ ನಂತರ ಮುಂದಿನ ಸಭೆಯ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ' ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಒಪ್ಪುವವರೆಗೂ ರೈತರ ಪ‍್ರತಿಭಟನೆಗಳು ಮುಂದುವರಿಯಲಿವೆ’ ಎಂದು ರೈತ ಮುಖಂಡ ಜಗಜೀತ್‌ ಸಿಂಗ್‌ ಡಲ್ಲೇವಾಲ್‌ ಇತ್ತೀಚೆಗೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.