ADVERTISEMENT

ಕಾಯ್ದೆಗಳ ರದ್ದತಿಗೆ ಬಿಗಿ ಪಟ್ಟು: ಸಂಧಾನಕ್ಕೆ ಇಕ್ಕಟ್ಟು

ನಿಲುವು ಸಡಿಲಿಸದ ರೈತರು, ಸರ್ಕಾರ

ಪಿಟಿಐ
Published 8 ಜನವರಿ 2021, 20:16 IST
Last Updated 8 ಜನವರಿ 2021, 20:16 IST
‘ಮಾಡು ಇಲ್ಲವೇ ಮಡಿ’ ಎಂಬರ್ಥದ ಘೋಷಣೆ ಬರೆದ ಹಾಳೆ ಪ್ರದರ್ಶಿಸಿದ ರೈತ ಮುಖಂಡ -- –ಪಿಟಿಐ ಚಿತ್ರ
‘ಮಾಡು ಇಲ್ಲವೇ ಮಡಿ’ ಎಂಬರ್ಥದ ಘೋಷಣೆ ಬರೆದ ಹಾಳೆ ಪ್ರದರ್ಶಿಸಿದ ರೈತ ಮುಖಂಡ -- –ಪಿಟಿಐ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ಮತ್ತು ಸರ್ಕಾರದ ನಡುವೆ ಶುಕ್ರವಾರ ನಡೆದ ಎಂಟನೇ ಸುತ್ತಿನ ಮಾತುಕತೆಯಲ್ಲಿಯೂ ಯಾವುದೇ ಪ್ರಯೋಜನ ಆಗಿಲ್ಲ. ತಮ್ಮ ‘ಘರ್‌ ವಾಪ್ಸಿ’ (ಮನೆಗೆ ಮರಳುವುದು) ಆಗಬೇಕಿದ್ದರೆ, ‘ಲಾ ವಾಪ್ಸಿ’ (ಕಾಯ್ದೆ ರದ್ದು) ಆಗಲೇಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.

ಕಾಯ್ದೆಗಳನ್ನು ರದ್ದು ಮಾಡುವ ಪ್ರಶ್ನೆಯೇ ಇಲ್ಲ, ಮಾತುಕತೆಯನ್ನು ವಿವಾದಾತ್ಮಕ ವಿಚಾರಗಳಿಗೆ ಸೀಮಿತಗೊಳಿಸೋಣ ಎಂಬುದು ಸರ್ಕಾರದ ನಿಲುವು. ವಿವಿಧ ರಾಜ್ಯಗಳ ದೊಡ್ಡ ಸಂಖ್ಯೆಯ ರೈತರು ‘ಕೃಷಿ ಸುಧಾರಣೆ’ ಕಾಯ್ದೆಗಳನ್ನು ಸ್ವಾಗತಿಸಿದ್ದಾರೆ. ಹಾಗಾಗಿ, ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳುಇಡೀ ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ಸರ್ಕಾರ ಹೇಳಿದೆ.

‘ಬೇಸಾಯವು ರಾಜ್ಯಕ್ಕೆ ಸಂಬಂಧಿಸಿದ ವಿಚಾರ ಎಂಬುದನ್ನು ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳು ಸ್ಪಷ್ಟವಾಗಿ ಹೇಳಿವೆ. ಹಾಗಾಗಿ, ಬೇಸಾಯದ ವಿಚಾರಗಳಲ್ಲಿ ಕೇಂದ್ರವು ಹಸ್ತಕ್ಷೇಪ ನಡೆಸಬಾರದು. ಹಲವು ಸುತ್ತಿನ ಮಾತುಕತೆ ನಡೆದಿದೆ. ನಿಮಗೆ (ಸರ್ಕಾರಕ್ಕೆ) ಸಮಸ್ಯೆ ಬಗೆಹರಿಸುವ ಇರಾದೆಯೇ ಇಲ್ಲ ಎಂಬುದು ನಿಜವಾಗಿದ್ದರೆ ಅದನ್ನು ಸ್ಪಷ್ಟವಾಗಿ ಹೇಳಿ. ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ. ಅನಗತ್ಯವಾಗಿ ಎಲ್ಲರ ಸಮಯವನ್ನು ಹಾಳು ಮಾಡುವುದು ಬೇಡ’ ಎಂದು ರೈತ ಮುಖಂಡರೊಬ್ಬರು ಹೇಳಿದ್ದಾರೆ.

ADVERTISEMENT

15 ರಂದು ಮತ್ತೆ ಮಾತುಕತೆ:

ಇದೇ 15ರಂದು ಮುಂದಿನ ಸುತ್ತಿನ ಮಾತುಕತೆ ನಡೆಯಲಿದೆ. ಕಾಯ್ದೆ ರದ್ದತಿ ವಿಚಾರ ಬಿಟ್ಟು ಅದಕ್ಕೆ ಪರ್ಯಾಯವಾದ ಪ್ರಸ್ತಾವಗಳೊಂದಿಗೆ ರೈತರು ಬರುವ ವಿಶ್ವಾಸವಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದ್ದಾರೆ. ರೈತರ ಪ್ರತಿಭಟನೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.