ಕರ್ನಾಲ್ (ಉತ್ತರ ಪ್ರದೇಶ): ಆಗಸ್ಟ್ 28ರಂದು ಕರ್ನಾಲ್ನಲ್ಲಿ ಪ್ರತಿಭಟನಕಾರರ ಮೇಲೆ ಲಾಠಿಪ್ರಹಾರ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರಿದಿದೆ.
ಮಂಗಳವಾರ ಸಂಜೆ ಸ್ಥಳೀಯ ಆಡಳಿತದೊಂದಿಗೆ ನಡೆದ ಮಾತುಕತೆ ವಿಫಲವಾದ ನಂತರ, ಪ್ರತಿಭಟನನಿರತ ರೈತರು ಸಂಯುಕ್ತ ಕಿಸಾನ್ ಮೋರ್ಚಾದ (ಎಸ್ಕೆಎಂ) ಕೆಲವು ನಾಯಕರೊಂದಿಗೆ ಮಿನಿ-ಸೆಕ್ರೆಟರಿಯೇಟ್ನ ಮುಖ್ಯ ದ್ವಾರದ ಹೊರಗೆ ರಾತ್ರಿ ಕಳೆದರು.
ಬುಧವಾರ ಬೆಳಿಗ್ಗೆ, ಸ್ವಯಂಸೇವಕರು ಪ್ರತಿಭಟನನಿರತ ರೈತರಿಗೆ ಚಹಾ ಉಪಾಹಾರ ನೀಡಿದರು. ‘ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ‘ ಎಂದು ಹರಿಯಾಣ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ಗುರ್ನಾಮ್ ಸಿಂಗ್ ಚದುನಿ ಸುದ್ದಿಗಾರರಿಗೆ ತಿಳಿಸಿದರು.
‘ರೈತರ ತಲೆ ಉರುಳಿಸುವ’ ಹೇಳಿಕೆ ನೀಡಿದ್ದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕಿಸಾನ್ ಸಂಯುಕ್ತ ಮೋರ್ಚಾ ಸಂಘಟನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆಯಿಂದಾಗಿ ಹರಿಯಾಣ ಸರ್ಕಾರ ಆಯುಷ್ ಸಿನ್ಹಾ ಅವರನ್ನು ವರ್ಗಾವಣೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.