ಬೆಂಗಳೂರು: ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಎರಡನೇ ಸಾವು ಸಂಭವಿಸಿದೆ. ಗುರುವಾರ ಒಂದೇ ದಿನ 4 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.
ಕಲಬುರ್ಗಿಯ ಮೊಹ್ಮದ್ ಹುಸೇನ್ ಸಿದ್ಧಿಕಿ ಇದೇ 10ರಂದು ಈ ಸೋಂಕಿಗೆ ಮೃತಪಟ್ಟಿದ್ದರು.ಮಾ.14 ರಂದು ಮೆಕ್ಕಾದಿಂದ ಬೆಂಗಳೂರಿಗೆ ಬಂದಿದ್ದಚಿಕ್ಕಬಳ್ಳಾಪುರದ 70 ವರ್ಷದ ವೃದ್ಧೆ (ರೋಗಿ 53) ಚಿಕಿತ್ಸೆ ಫಲಿಸದೆಯೇ ಮಾ.24 ನಿಧನರಾಗಿದ್ದರು. ಅವರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.ವೈದ್ಯಕೀಯ ಪರೀಕ್ಷೆಯ ಬಳಿಕ ಅವರು ಕೋವಿಡ್–19 ರೋಗದಿಂದ ಬಳಲಿದ್ದರು ಎನ್ನುವುದು ದೃಢಪಟ್ಟಿದೆ.
ಹೊಸದಾಗಿ ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರದಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.ಈವರೆಗೆ ಗುಣಮುಖರಾದ ಮೂವರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. 50ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.36 ಮಂದಿಯನ್ನು ಸೋಂಕು ಶಂಕೆ ಹಿನ್ನೆಲೆಯಲ್ಲಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ದೇಶದಲ್ಲಿ ನಾಲ್ಕು ಮಂದಿ ಬಲಿ
ಕೋವಿಡ್ 19 ರೋಗದಿಂದಾಗಿ ದೇಶದಲ್ಲಿ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ. ಗುರುವಾರ ಮತ್ತೆ 43 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಸಾವಿನ ಸಂಖ್ಯೆ 16ಕ್ಕೇರಿದೆ. ಸೋಂಕಿತರ ಸಂಖ್ಯೆ 719ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಕಿನ್ಸ್ ಕೊರೊನಾ ವೈರಸ್ ಕೇಂದ್ರವು ಮಾಹಿತಿ ನೀಡಿದೆ.
ಭಾರತದಲ್ಲಿ ಸೋಂಕು ಪ್ರಕರಣಗಳ ಏರಿಕೆ ದರವು ಸ್ಥಿರವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.ಜಗತ್ತಿನಾದ್ಯಂತ 175 ದೇಶಗಳಿಗೆ ಈ ಪಿಡುಗು ಹರಡಿದೆ. 22,184 ಜನರು ಮೃತಪಟ್ಟಿದ್ದಾರೆ ಮತ್ತು 4.91 ಲಕ್ಷ ಜನರಿಗೆ ಸೋಂಕು ತಗಲಿದೆ. 1.19 ಲಕ್ಷ ಜನರು ಕೋವಿಡ್ 19 ರೋಗದಿಂದ ಗುಣಮುಖರಾಗಿದ್ದಾರೆ.
ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಮೇಲಿನ ನಿಷೇಧವನ್ನು ಏಪ್ರಿಲ್ 14ರವರೆಗೆ ಭಾರತ ಸರ್ಕಾರ ವಿಸ್ತರಿಸಿದೆ. ಈ ಹಿಂದೆ, ಮಾರ್ಚ್ 29ರವರೆಗೆ ನಿಷೇಧ ಹೇರಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.