ADVERTISEMENT

ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಡಿದ ಆರೋಪ: ಬಂಗಾಳ ಬಿಜೆಪಿ ಸಂಸದನ ವಿರುದ್ಧ ದೂರು

ಪಿಟಿಐ
Published 17 ಏಪ್ರಿಲ್ 2020, 8:30 IST
Last Updated 17 ಏಪ್ರಿಲ್ 2020, 8:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಲ್ಕತ್ತಾ: ಇಬ್ಬರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಅಂತ್ಯಸಂಸ್ಕಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅಕ್ಷೇಪಾರ್ಹ ಹೇಳಿಕೆ ಪ್ರಕಟಿಸಿದ್ದ ಬಂಕುರಾ ಕ್ಷೇತ್ರದ ಬಿಜೆಪಿ ಸಂಸದನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ನಾಯಕ ಚಟ್ಟೋಪಾಧ್ಯಾಯ ಈ ಸಂಬಂಧ ಬಂಕುರ ಸದರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

'ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ ಎನ್ನಲಾದವರ ಅಂತ್ಯಸಂಸ್ಕಾರವನ್ನು ಅಧಿಕಾರಿಗಳು ತರಾತುರಿಯಲ್ಲಿ ಮುಗಿಸಿದ್ದಾರೆ' ಎಂದು ಬಿಜೆಪಿ ಸಂಸದ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.

ADVERTISEMENT

'ಸ್ವತಃ ವೈದ್ಯರೂ ಆಗಿರುವ ಸಂಸದರು ಯಾವುದೇ ವರದಿಯನ್ನು ಪರಿಶೀಲಿಸದೆ ಹೀಗೆ ಹೇಳಿರುವುದು ತಪ್ಪು. ಕೋವಿಡ್-19 ಪಿಡುಗಿನಿಂದ ಜನರಲ್ಲಿ ಆತಂಕ ಮೂಡಿರುವ ಸಂದರ್ಭದಲ್ಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡಲು ಯತ್ನಿಸಿದ್ದಾರೆ ಎಂದು ಜೇದೀಪ್ ಹೇಳಿದ್ದಾರೆ.

'ವರದಿ ಬರುವ ಮೊದಲೇ ಅಧಿಕಾರಿಗಳು ಹೇಗೆ ಅಂತ್ಯಸಂಸ್ಕಾರ ನೆರವೇರಿಸಿದರು' ಎಂದು ಬಿಜೆಪಿ ಸಂಸದ ಮರು ಪ್ರಶ್ನೆ ಹಾಕಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಇಬ್ಬರ ದೇಹಗಳಿಗೆ ಅಧಿಕಾರಿಗಳು ಏಪ್ರಿಲ್ 12ರ ಮಧ್ಯರಾತ್ರಿ ಅಂತ್ಯಸಂಸ್ಕಾರ ಮಾಡಿದ್ದರು. ಇವರಿಬ್ಬರೂ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕೆಲವರು ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.