ADVERTISEMENT

ಗುರುಗ್ರಾಮ ಭೂ ಖರೀದಿ ಅಕ್ರಮ: ರಾಬರ್ಟ್ ವಾದ್ರಾ, ಬೂಪಿಂದರ್‌ ವಿರುದ್ಧ ಎಫ್ಐಆರ್‌

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 5:15 IST
Last Updated 2 ಸೆಪ್ಟೆಂಬರ್ 2018, 5:15 IST
   

ಚಂಡೀಗಡ:ಗುರುಗ್ರಾಮ ಭೂ ಖರೀದಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ, ಹರಿಯಾಣ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಪ್ರಕರಣ ಸಂಬಂಧ ಹರಿಯಾಣ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಅಲ್ಲದೆ, ಡಿಎಲ್‌ಎಫ್‌ ಮತ್ತು ಓಂಕಾರೇಶ್ವರ ಪ್ರಾಪರ್ಟೀಸ್‌ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗಿದೆ. ‘ನೂಹ್‌ ನಿವಾಸಿ ಸುರಿಂದರ್‌ ಶರ್ಮಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸ್‌ ಕಮಿಷನರ್‌ ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ವಾದ್ರಾ ಅವರಿಗೆ ಸೇರಿದ ಸ್ಕೈ ಲೈಟ್‌ ಹಾಸ್ಪಿಟಾಲಿಟಿ ಕಂಪನಿ ಗುರುಗ್ರಾಮ ಸೆಕ್ಟರ್‌ 83, ಶಿಕೊಪುರ, ಸಿಕಂದರ್‌ಪುರ, ಖೇದಿ ದೌಲಾ ಮತ್ತು ಸಿಹಿಯಲ್ಲಿ ₹7.5 ಕೋಟಿಗೆ ಭೂಮಿ ಖರೀದಿಸಿದೆ. ಬಳಿಕ ಅದನ್ನು ₹55 ಕೋಟಿಗೆ ಮಾರಾಟ ಮಾಡಿದೆಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ನಿಜವಾದ ಸಮಸ್ಯೆಗಳಿಂದ ಜನರನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಲಾಗುತ್ತಿದೆ. ಚುನಾವಣೆ ಸಮಯದಲ್ಲಿ ತೈಲ ಬೆಲೆ ಹೆಚ್ಚಳಯಂತ ಸಂಗತಿಗಳ ಬಗ್ಗೆ ಗಮನಹರಿಸಬೇಕಲ್ಲವೇ? ಎಂದು ವಾದ್ರಾ ಹೇಳಿದ್ದಾರೆ.

2010–11ರಲ್ಲಿ ಹರಿಯಾಣ ಮತ್ತು ರಾಜಸ್ಥಾನದಲ್ಲಿಸ್ಕೈ ಲೈಟ್‌ ಹಾಸ್ಪಿಟಾಲಿಟಿ ಕಂಪೆನಿ ನಡೆಸಿದ ಭೂವ್ಯವಹಾರಗಳಿಂದ ಗಳಿಸಿದ ಲಾಭಕ್ಕೆ ಸಂಬಂಧಿಸಿದಂತೆ ಮರು ಲೆಕ್ಕಪತ್ರ ವಿವರ ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆ ವಾದ್ರಾ ಅವರ ಕಂಪೆನಿಗೆ ನೋಟಿಸ್‌ ನೀಡಿತ್ತು. ಇದನ್ನು ಪ್ರಶ್ನಿಸಿ ಸ್ಕೈಲೈಟ್‌ ಕಂಪೆನಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿತ್ತು. ಆದರೆ, ಕೋರ್ಟ್‌ ಈ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶದ ವಿರುದ್ಧ ಕಂಪೆನಿಯು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಹೈಕೋರ್ಟ್ ಆದೇಶದಲ್ಲಿ ಮಧ್ಯೆ ಪ್ರವೇಶಿಸಲು 2018ರ ಎಪ್ರಿಲ್‌ನಲ್ಲಿ ನಿರಾಕರಿಸಿತ್ತು.

ರಾಬರ್ಟ್‌ ವಾದ್ರಾ ಅವರ ಕಂಪನಿ ಕಡಿಮೆ ಬೆಲೆಗೆಖರೀದಿಸಿದ್ದ ಭೂಮಿಯನ್ನು ಅಧಿಕ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಂಡಿದೆ ಎಂದು 2012ರಲ್ಲಿ ಅರವಿಂದ ಕೇಜ್ರಿವಾಲ್ ಅವರು ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.