ADVERTISEMENT

‘ಪ್ರತಿಭಟನೆ ಮೊದಲು, ಮದುವೆ ಆಮೇಲೆ’

ಪಿಟಿಐ
Published 23 ಡಿಸೆಂಬರ್ 2020, 21:36 IST
Last Updated 23 ಡಿಸೆಂಬರ್ 2020, 21:36 IST

ನವದೆಹಲಿ:ಯುಎಇಯಲ್ಲಿ ಉದ್ಯೋಗದಲ್ಲಿರುವ ಸತ್ನಾಮ್ ಸಿಂಗ್ ಎಂಬುವರು ಎರಡು ವರ್ಷಗಳ ಬಳಿಕ ಎರಡು ತಿಂಗಳ ರಜೆ ಮೇಲೆ ಭಾರತಕ್ಕೆ ಬಂದಿದ್ದಾರೆ. ಮದುವೆಯಾಗಿ ಪತ್ನಿ ಜತೆ ಯುಎಇ ವಿಮಾನ ಹತ್ತಬೇಕಿದ್ದ ಅವರು ತಮ್ಮ ಮನಸ್ಸು ಬದಲಿಸಿದ್ದಾರೆ.

ಅವರು ನ.29ರಂದು ಪಂಜಾಬ್‌ನ ಜಲಂಧರ್‌ಗೆ ಬಂದಾಗ, ತಮ್ಮ ಅಣ್ಣ ಹಾಗೂ ಊರಿನ ಜನರು ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆಗೆ ಹೋಗಿರುವುದು ತಿಳಿಯಿತು.ಎರಡು ದಿನ ಊರಲ್ಲಿ ಕಳೆದ ಅವರು, ಬೈಕ್ ಹತ್ತಿ ಸೀದಾ ಸಿಂಘು ಗಡಿಗೆ ಸ್ನೇಹಿತರ ಜೊತೆ ಬಂದುಬಿಟ್ಟರು. ‘ಪ್ರತಿಭಟನೆ ಮೊದಲು. ಮದುವೆ, ಉದ್ಯೋಗ ಆಮೇಲೆ’ ಎಂದು ವಿದೇಶದಲ್ಲಿ ಪ್ಲಂಬರ್ ಆಗಿರುವ ಸತ್ನಾಮ್ ಹೇಳುತ್ತಾರೆ.

‘ನಾನು ಯುಎಇಗೆ ಹೋಗುವ ಮುನ್ನ ರೈತನಾಗಿದ್ದೆ. ನನ್ನ ಜಮೀನನ್ನು ಮೊದಲು ಉಳಿಸಿಕೊಳ್ಳಬೇಕಿದೆ. ರೈತರ ಹೋರಾಟದಲ್ಲಿ ಜಯ ಸಿಗುವವರೆಗೂ ಇಲ್ಲಿ ಇರುತ್ತೇನೆ’ ಎಂದು ಹೇಳಿದ್ದಾರೆ.

ADVERTISEMENT

ಪ್ರತಿಭಟನೆಯಿಂದ ತೊಂದರೆ ಸಲ್ಲದು:ರೈತರು ತಮ್ಮ ಪ್ರತಿಭಟನೆಯ ಹಕ್ಕನ್ನು ಸಮಸ್ಯೆ ಪರಿಹರಿಸಲು ಬಳಸಬೇಕೇ ವಿನಾ, ಸಾಮಾನ್ಯ ಜನಜೀವನಕ್ಕೆ ತೊಂದರೆ ಉಂಟುಮಾಡಲು ಬಳಸಬಾರದು ಎಂದು ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಂಘದ (ಫಿಕ್ಕಿ) ಅಧ್ಯಕ್ಷ ಉದಯ್ ಶಂಕರ್ ಹೇಳಿದ್ದಾರೆ.

‘ಜನರ ಪ್ರತಿಭಟನೆಯ ಹಕ್ಕನ್ನು ನಾವು ಗೌರವಿಸಬೇಕಾದರೆ, ಪ್ರತಿಭಟನೆಯು ಜನರ ಸಾಮಾನ್ಯ ಜೀವನಕ್ಕೆ ಅಡ್ಡಿ ಉಂಟುಮಾಡಬಾರದು. ಈ ಮೂಲಕ ಸಾಮಾನ್ಯ ಜನಜೀವನ ಮತ್ತು ವ್ಯವಹಾರವನ್ನು ನಾವು ಗೌರವಿಸಬೇಕು’ ಎಂದಿದ್ದಾರೆ.

ಬಿಕ್ಕಟ್ಟು ಪರಿಹಾರಕ್ಕೆ ಬಹುಮುಖ್ಯವಾಗಿ, ರಚನಾತ್ಮಕ ಚೌಕಟ್ಟಿನಲ್ಲಿ ಸಂವಾದ ನಡೆಸುವ ಅವಶ್ಯಕತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಕೃಷಿ ಕ್ಷೇತ್ರವು ಕನಿಷ್ಠ ಸುಧಾರಿತ ಕ್ಷೇತ್ರಗಳಲ್ಲಿ ಒಂದಾಗಿದೆ. ನಾವು ಕೃಷಿ ಉತ್ಪಾದನೆ, ಇಳುವರಿಯನ್ನು ಹೆಚ್ಚಿಸಬೇಕಾಗಿದೆ. ರೈತರ ಆದಾಯವನ್ನು ಹೆಚ್ಚಿಸಬೇಕಾಗಿದೆ. ಕೃಷಿ ಕ್ಷೇತ್ರಕ್ಕೆ ಬಂಡವಾಳವನ್ನು ಹರಿಸಬೇಕಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.