ADVERTISEMENT

ರಾಜಸ್ಥಾನ ಪ್ರವಾಹ-ಶನಿವಾರದಿಂದ ಶಾಲೆಯಲ್ಲೇ ಉಳಿದ350 ವಿದ್ಯಾರ್ಥಿಗಳು,50 ಶಿಕ್ಷಕರು

ಎಡಬಿಡದೆ ಸುರಿಯುತ್ತಿರುವ ಮಳೆ, ರಾಣಾಪ್ರತಾಪ ಅಣೆಕಟ್ಟಿಯಿಂದ ಹೆಚ್ಚಿನ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 11:22 IST
Last Updated 15 ಸೆಪ್ಟೆಂಬರ್ 2019, 11:22 IST
   

ರಾಜಸ್ಥಾನ (ಚಿತ್ತೋರ್ ಘರ್): ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿಚಿತ್ತೋರ್‌ಘರ್ ಜಿಲ್ಲೆಯ ಶಾಲೆಯೊಂದರಲ್ಲಿ ಸುಮಾರು 350 ವಿದ್ಯಾರ್ಥಿಗಳು ಹಾಗೂ 50 ಮಂದಿ ಶಿಕ್ಷಕರು ಸಿಲುಕಿಕೊಂಡು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ರಾಜಸ್ಥಾನದ ಹಲವೆಡೆ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಣೆಕಟ್ಟೆಗಳೆಲ್ಲಾ ಭರ್ತಿಯಾಗುತ್ತಿದ್ದು, ಪ್ರಮುಖವಾದ ರಾಣಾಪ್ರತಾಪ್ ಅಣೆಕಟ್ಟೆಯಿಂದ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ಬಹುತೇಕ ಗ್ರಾಮಗಳು ಜಲಾವೃತವಾಗಿವೆ. ಜನ ಜೀವ ಅಸ್ತವ್ಯಸ್ತವಾಗಿದೆ.

ಗ್ರಾಮವೊಂದರಲ್ಲಿ ಶನಿವಾರ ಎಂದಿನಂತೆ ಶಾಲೆ ಆರಂಭವಾಗಿತ್ತು. ಆದರೆ, ಶಾಲೆ ಅವಧಿ ಮುಗಿಯುವಷ್ಟರಲ್ಲಿ ಅಣೆಕಟ್ಟೆಯಿಂದ ಹೆಚ್ಚಿನ ನೀರು ಬಿಡುಗಡೆ ಮಾಡಲಾಗಿದೆ. ಶಾಲೆಯ ಅವಧಿ ಮುಗಿದು ವಿದ್ಯಾರ್ಥಿಗಳು ಹೊರಗೆ ಬಂದು ನೋಡಿದ್ದಾರೆ. ಆದರೆ, ಗ್ರಾಮದ ಎಲ್ಲಾ ರಸ್ತೆಗಳು ನೀರಿನಿಂದ ಆವೃತ್ತವಾಗಿದ್ದವು. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗ್ರಾಮದಿಂದಹೊರಗೆ ಹೋಗಲಾರದೆ ಶಾಲೆಯಲ್ಲಿಯೇ ಉಳಿದುಕೊಳ್ಲಬೇಕಾಯಿತು.

ADVERTISEMENT

ವಿಷಯ ತಿಳಿದ ಪೋಷಕರು ಏನೂ ಮಾಡಲಾರದ ಸ್ಥಿತಿಗೆ ತಲುಪಿದ್ದು ಪರದಾಡುವಂತಾಗಿದೆ,ಶನಿವಾರ ಮಧ್ಯಾಹ್ನದಿಂದ ಭಾನುವಾರ ಮಧ್ಯಾಹ್ನದವರೆಗೂ ಇದು ಮುಂದುವರಿದಿದೆ. ಮಕ್ಕಳು ಊಟವಿಲ್ಲದೆ, ಪರದಾಡುತ್ತಿದ್ದುದನ್ನು ನೋಡಿದ ಸ್ಥಳೀಯರು ತಾವೇ ಮುಂದೆ ಬಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಊಟದ ವ್ಯವಸ್ಥೆ ಮಾಡಿದ್ದಾರೆ. ಮೇಲಧಿಕಾರಿಗಳಿಗೆ ವಿಷಯ ತಿಳಿಸಲಾಗಿದ್ದು ಹೆಚ್ಚಿನ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದರಿಂದಾಗಿ ಮಾಹಿ ಹಾಗೂ ಜಾಖಂ ನದಿಗಳಲ್ಲಿ ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.ಪೂರ್ವ ರಾಜಸ್ಥಾನದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಶನಿವಾರ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಪ್ರತಾಪ್ ಘರ್ ಜಿಲ್ಲೆ ಬಹುತೇಕ ಗ್ರಾಮಗಳುಪ್ರವಾಹದಿಂದ ತತ್ತರಿಸಿದ್ದು ರಾಜಸ್ಥಾನ ಸರ್ಕಾರ ತ್ವರಿತ ಕ್ರಮಕೈಗೊಂಡರೂ ಸಮಸ್ಯೆ ಮತ್ತೆ ಹೆಚ್ಚಾಗುತ್ತಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.