ಅಸ್ಸಾಂನ ಹೊಜಾಯ್ ಜಿಲ್ಲೆಯ ಜಮುನಾಮುಖ್ ಪ್ರದೇಶದಲ್ಲಿ ಪ್ರವಾಹದಿಂದ ತೊಂದರೆಗೊಳಗಾದವರು ದೋಣಿಯಲ್ಲಿ ಸುರಕ್ಷಿತ ಪ್ರದೇಶಕ್ಕೆ ತೆರಳಿದರು
–ಪಿಟಿಐ ಚಿತ್ರ
ಗುವಾಹಟಿ: ಅಸ್ಸಾಂನಲ್ಲಿ ಮಂಗಳವಾರವೂ ಮಳೆಯ ಅಬ್ಬರ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿದೆ. 22 ಜಿಲ್ಲೆಗಳ 5.35 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ತೊಂದರೆಗೀಡಾಗಿದ್ದು, ಹವಾಮಾನ ಇಲಾಖೆಯು ರಾಜ್ಯದ ಕೆಲವು ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಕರೆ ಮಾಡಿ ಮಾತನಾಡಿದ್ದು, ಪ್ರವಾಹ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲದ ಭರವಸೆಯನ್ನು ಅವರು ನೀಡಿದ್ದಾರೆ.
ಹಿಮಂತ ಅವರು ಪ್ರವಾಹದಿಂದ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿರುವ ಕಛಾರ್ ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತರ ಜತೆ ಮಾತುಕತೆ ನಡೆಸಿದ್ದಾರೆ.
ಗುವಾಹಟಿಯ ಪ್ರಾದೇಶಿಕ ಹವಾಮಾನ ಕೇಂದ್ರವು ಧುಬ್ರಿ, ದಕ್ಷಿಣ ಸಲ್ಮಾರ ಮನಕಚಾರ್, ಗೋಲ್ಪಾರಾ ಮತ್ತು ಕೊಕ್ರಝಾರ್ ಜಿಲ್ಲೆಗಳಿಗೆ ಮಂಗಳವಾರ ‘ಆರೆಂಜ್ ಅಲರ್ಟ್’ ನೀಡಿದೆ.
ಪ್ರವಾಹ ಮತ್ತು ಭೂಕುಸಿತ ಸೇರಿದಂತೆ ಮಳೆಸಂಬಂಧಿ ಅವಘಡಗಳಿಂದ ಒಟ್ಟು 11 ಮಂದಿ ಮೃತಪಟ್ಟಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ. ಒಟ್ಟಾರೆ ಪ್ರವಾಹ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ರಸ್ತೆ, ರೈಲು ಮತ್ತು ದೋಣಿ ಸೇವೆಗಳು ಸ್ಥಗಿತಗೊಂಡಿವೆ.
22 ಜಿಲ್ಲೆಗಳ 1,254 ಗ್ರಾಮಗಳಲ್ಲಿ 5.35 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ. ಶ್ರೀಭೂಮಿ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 1.94 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಟ್ಟು 165 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 31,212 ಮಂದಿ ಆಶ್ರಯ ಪಡೆದಿದ್ದಾರೆ.
ಬ್ರಹ್ಮಪುತ್ರ, ಬರಾಕ್ ಮತ್ತು ಕೊಪಿಲಿ ನದಿಗಳು ಹಲವು ಕಡೆಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸೋಮವಾರ ರಾತ್ರಿವರೆಗಿನ ಮಾಹಿತಿ ಪ್ರಕಾರ ರಾಜ್ಯದ ಇತರ ಏಳು ನದಿಗಳೂ ಉಕ್ಕಿ ಹರಿಯುತ್ತಿವೆ.
ಈಶಾನ್ಯದ ಇತರ ರಾಜ್ಯಗಳಾದ ಮಣಿಪುರ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲೂ ಮಳೆ ಮುಂದುವರಿದಿದೆ.
ಮಣಿಪುರದಲ್ಲಿ ಪ್ರವಾಹದಿಂದ 56 ಸಾವಿರ ಮಂದಿ ತೊಂದರೆಗೊಳಗಾಗಿದ್ದು 10477 ಮನೆಗಳಿಗೆ ಹಾನಿಯಾಗಿವೆ
ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಸೋಮವಾರ ವ್ಯಕ್ತಿಯೊಬ್ಬರು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ
ಕಳೆದ ಐದು ದಿನಗಳಲ್ಲಿ ರಾಜ್ಯದಾದ್ಯಂತ 93 ಭೂಕುಸಿತ ಘಟನೆಗಳು ವರದಿಯಾಗಿವೆ
ಅರುಣಾಚಲ ಪ್ರದೇಶದಲ್ಲಿ ಮಳೆ ಸಂಬಂಧಿ ಅವಘಡಗಳಿಂದ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ
23 ಜಿಲ್ಲೆಗಳ 156 ಗ್ರಾಮಗಳ ಜನರು ಪ್ರವಾಹದಿಂದ ತೊಂದರೆಗೆ ಸಿಲುಕಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.