ನವದೆಹಲಿ: ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಛತ್ತೀಸಗಡ ಮುಖ್ಯಮಂತ್ರಿ ಭುಪೇಶ್ ಬಘೇಲ್ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೂಚಿಸಿದ್ದಾರೆ.
‘ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಮಂಡಿಸಿದ್ದ ಅರಣ್ಯ ವಾಸಿಗಳು ಎನ್ನುವ ಪ್ರತಿಪಾದನೆ ತಿರಸ್ಕೃತವಾಗಿರುವುದರಿಂದ ಬುಡಕಟ್ಟು ಜನರು ಮತ್ತು ಇತರರನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಹೀಗಾಗಿ, ತ್ವರಿತಗತಿಯಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಬೇಕು’ ಎಂದು ರಾಹುಲ್ ಗಾಂಧಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.
‘ಅಪಾರ ಪ್ರಮಾಣದಲ್ಲಿ ತೆರವುಗೊಳಿಸುವುದನ್ನು ತಡೆಯಲು ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಅಥವಾ ಅರಣ್ಯ ವಾಸಿಗಳ ಹಿತಾಸಕ್ತಿ ಕಾಪಾಡುವ ಇತರ ಯಾವುದಾದರೂ ಕ್ರಮಕೈಗೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.
‘2018ರ ಏಪ್ರಿಲ್ಗೆ ಅನ್ವಯವಾಗುವಂತೆ ಶೇಕಡ 45ರಷ್ಟು ಮಂದಿಗೆ ವೈಯಕ್ತಿಕ ಅರಣ್ಯ ಹಕ್ಕು ಮತ್ತು ಶೇಕಡ 50ರಷ್ಟು ಮಂದಿಗೆ ಸಮುದಾಯ ಅರಣ್ಯದ ಹಕ್ಕಿನ ಅನುಮೋದನೆ ನೀಡಲಾಗಿದೆ ಎಂದು ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಕುರಿತು ಬುಡಕಟ್ಟು ವ್ಯವಹಾರಗಳ ಸಚಿವಾಲಯ ನೀಡಿದ ವರದಿಯಲ್ಲಿ ತಿಳಿಸಲಾಗಿದೆ. ಜತೆಗೆ, ಕ್ಷುಲ್ಲಕ ಆಕ್ಷೇಪಗಳನ್ನು ಅರಣ್ಯ ಸಿಬ್ಬಂದಿ ಸಲ್ಲಿಸಿದೆ. ಇದರಿಂದಾಗಿ, ಅರಣ್ಯ ವಾಸಿಗಳು ಎನ್ನುವ ವಾದ ತಿರಸ್ಕೃತಗೊಂಡಿದೆ’ ಎಂದು ಹೇಳಿದ್ದಾರೆ.
‘ಈ ಎಲ್ಲ ಅಂಶಗಳನ್ನು ಪರಿಗಣಿಸಿ ಲಕ್ಷಾಂತರ ಆದಿವಾಸಿಗಳು ಮತ್ತು ಇತರ ಅರಣ್ಯ ವಾಸಿಗಳ ಹಕ್ಕುಗಳನ್ನು ಕಾಪಾಡಲು ಪ್ರಯತ್ನಿಸಬೇಕು’ ಎಂದು ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.