ADVERTISEMENT

ಭ್ರಷ್ಟಾಚಾರ: ಎಐಎಡಿಎಂಕೆ ಮಾಜಿ ಸಚಿವನ ವಿರುದ್ಧ ಎಫ್‌ಐಆರ್‌

ಪಿಟಿಐ
Published 21 ಸೆಪ್ಟೆಂಬರ್ 2024, 14:41 IST
Last Updated 21 ಸೆಪ್ಟೆಂಬರ್ 2024, 14:41 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಚೆನ್ನೈ: ಲಂಚ ಸ್ವೀಕರಿಸಿದ ಆರೋಪದ ಮೇಲೆ ಮಾಜಿ ವಸತಿ ಸಚಿವ ಹಾಗೂ ಎಐಎಡಿಎಂಕೆಯ ಉಚ್ಚಾಟಿತ ನಾಯಕ ಆರ್‌. ವೈತಿಲಿಂಗಂ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ತಮಿಳುನಾಡಿನ ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯವು ಪ್ರಕರಣ ದಾಖಲಿಸಿದೆ.

ವಸತಿ ಯೋಜನೆಗೆ ಯೋಜನಾ ಅನುಮತಿ ನೀಡಲು ರಿಯಲ್‌ ಎಸ್ಟೇಟ್‌ ಕಂಪನಿಯೊಂದರಿಂದ ವೈತಿಲಿಂಗಂ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಉಚ್ಚಾಟಿತರಾದ ಬಳಿಕ ಪನ್ನೀರ್‌ಸೆಲ್ವಂ ಅವರಿಗೆ ನಿಷ್ಠರಾಗಿರುವ ವೈತಿಲಿಂಗಂ, ಅವರ ಮಕ್ಕಳು ಮತ್ತು ಶ್ರೀರಾಂ ಪ್ರಾಪರ್ಟೀಸ್‌ ಎಂಬ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ. ವಸತಿ ಸಮುಚ್ಚಯಕ್ಕೆ ಯೋಜನಾ ಅನುಮತಿ ಪಡೆಯಲು ಶ್ರೀರಾಂ ಪ್ರಾಪರ್ಟೀಸ್‌ ಕಂಪನಿಯು ₹27.9 ಕೋಟಿ ಹಣವನ್ನು ವೈತಿಲಿಂಗಂ ಅವರ ಅಜ್ಞಾತ ಕಂಪನಿಯಾದ ಮುತ್ತಮ್ಮಲ್‌ ಎಸ್ಟೇಟ್ಸ್‌ಗೆ ರವಾನಿಸಿತ್ತು ಎಂದು ಆರೋಪಿಸಲಾಗಿದೆ.

ವೈತಿಲಿಂಗಂ ಅವರು ಎಐಡಿಎಂಕೆ ಅಧಿಕಾರವಧಿಯಲ್ಲಿ 2011ರಿಂದ 2016ರವರೆಗೆ ವಸತಿ ಸಚಿವರಾಗಿದ್ದರು. 2013ರ ಡಿಸೆಂಬರ್‌ನಲ್ಲಿ ಚೆನ್ನೈ ಮೆಟ್ರೊಪಾಲಿಟನ್‌ ಅಭಿವೃದ್ಧಿ ಪ್ರಾಧಿಕಾರಕ್ಕೆ ವಸತಿ ಯೋಜನೆಗಾಗಿ ಅನುಮತಿ ಕೋರಿ ಶ್ರೀರಾಂ ಪ್ರಾಪರ್ಟೀಸ್‌ ಪ್ರಸ್ತಾವ ಸಲ್ಲಿಸಿತ್ತು.

ADVERTISEMENT

ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಆಪ್ತ, ಮಾಜಿ ಸಚಿವ ಎಸ್‌.ಪಿ ವೇಲುಮಣಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪದ ಮೇಲೆ ಪ್ರಕರಣ ದಾಖಲಿಸಿದ ಕೆಲವೇ ದಿನಗಳಲ್ಲಿ ವೈತಿಲಿಂಗಂ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ವೇಲುಮಣಿ ಅವರು ಗ್ರೇಟರ್‌ ಚೆನ್ನೈ ಕಾರ್ಪೊರೇಷನ್‌ನ ಮಳೆನೀರು ಚರಂಡಿ ಮತ್ತು ರಸ್ತೆ ಕಾಮಗಾರಿಗಳ ಟೆಂಡರ್‌ ನೀಡುವಾಗ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.