ADVERTISEMENT

ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎಂದು ಸಂಸದರಿಗೆ ಹೇಳಿದ ಮೆಹಬೂಬಾ ಮುಫ್ತಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 6:35 IST
Last Updated 8 ಆಗಸ್ಟ್ 2019, 6:35 IST
   

ನವದೆಹಲಿ: ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತಮ್ಮ ಇಬ್ಬರು ಸಂಸದರಿಗೆ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಗೃಹ ಬಂಧನದಲ್ಲಿದ್ದ ಮುಫ್ತಿಯನ್ನು ಇದೀಗ ಅತಿಥಿ ಗೃಹಕ್ಕೆ ಕರೆದೊಯ್ಯಲಾಗಿದೆ.ಸಂಸದರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ ಪಕ್ಷದಿಂದ ಹೊರನಡೆಯಲು ಸಿದ್ಧವಾಗಿರಬೇಕು ಎಂದು ಮುಫ್ತಿ ಹೇಳಿರುವುದಾಗಿಅವರ ಆಪ್ತರೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಮುಫ್ತಿ ಈ ರೀತಿ ಹೇಳಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ಪಿಡಿಪಿ 2018 ಜೂನ್‌‌ನಲ್ಲಿ ಬೆಂಬಲ ಪಾಪಸ್ ಪಡೆದುಕೊಂಡಿತ್ತು. ಪಿಡಿಪಿಯ ಇಬ್ಬರು ಸದಸ್ಯರು ರಾಜ್ಯಸಭೆಯಲ್ಲಿದ್ದಾರೆ. ರಾಜ್ಯಸಭೆಯಲ್ಲಿ ಕಾಶ್ಮೀರದ ವಿಶೇಷಾಧಿಕಾರ ರದ್ದು ಪಡಿಸುವ ನಿಲುವು ಅಂಗೀಕಾರವಾದ ಕೂಡಲೇ ಪಿಡಿಪಿ ಸಂಸದರಾದ ಮೀರ್ ಫಯಾಜ್ ಮತ್ತು ನಜೀರ್ ಅಹ್ಮದ್ ಲಾವೇ ಅವರು ರಾಜ್ಯಸಭೆಯಲ್ಲಿ ಸಂವಿಧಾನದ ಪ್ರತಿಗಳನ್ನು ಹರಿದು ಪ್ರತಿಭಟಿಸಿದ್ದರು.

ತಾವು ರಾಜೀನಾಮೆ ನೀಡುವ ಸಿದ್ಧತೆಯಲ್ಲಿದ್ದೇವೆ ಎಂದು ಫಯಾಜ್ ಹೇಳಿದ್ದರೂ ಪಿಡಿಪಿ ನಾಯಕರೊಂದಿಗೆ ಈ ಬಗ್ಗೆ ಮಾತನಾಡಬೇಕಿದೆ ಎಂದಿದ್ದಾರೆ. ಸಂಪರ್ಕ ಕಡಿತ ಮಾಡಿರುವ ಕಾರಣ ನಮಗೆ ಯಾರೊಂದಿಗೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ನಾವು ಚರ್ಚೆ ಮಾಡಿದ ನಂತರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ ಫಯಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.