ADVERTISEMENT

ಲಖನೌನಲ್ಲಿ ಭಾರಿ ಬೆಂಕಿ ಅವಘಡ: ನಾಲ್ವರ ಸಾವು

ಘಟನೆಯ ಬಗ್ಗೆ ತನಿಖೆಗೆ ಸಿ.ಎಂ ಯೋಗಿ ಆದೇಶ * 18 ಮಂದಿಗೆ ತೀವ್ರ ಗಾಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 14:14 IST
Last Updated 5 ಸೆಪ್ಟೆಂಬರ್ 2022, 14:14 IST
ಹೋಟೆಲ್‌ವೊಂದರಲ್ಲಿ ನಡೆದ ಬೆಂಕಿ ಅವಘಡದಲ್ಲಿ ಸಿಲುಕಿಕೊಂಡವರನ್ನು ಅಗ್ನಿ ಶಾಮಕ ಸಿಬ್ಬಂದಿ ಸೋಮವಾರ ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದರು – ಪಿಟಿಐ ಚಿತ್ರ
ಹೋಟೆಲ್‌ವೊಂದರಲ್ಲಿ ನಡೆದ ಬೆಂಕಿ ಅವಘಡದಲ್ಲಿ ಸಿಲುಕಿಕೊಂಡವರನ್ನು ಅಗ್ನಿ ಶಾಮಕ ಸಿಬ್ಬಂದಿ ಸೋಮವಾರ ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದರು – ಪಿಟಿಐ ಚಿತ್ರ   

ಲಖನೌ: ಹಜರತ್‌ಗಂಜ್‌ನಲ್ಲಿರುವ ನಾಲ್ಕು ಮಹಡಿಯ ಹೋಟೆಲ್‌ವೊಂದರಲ್ಲಿ ಸೋಮವಾರ ಬೆಳಿಗ್ಗೆ ಭಾರಿ ಬೆಂಕಿ ಅವಘಡದಲ್ಲಿ, ನವ ದಂಪತಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 18 ಮಂದಿಗೆ ಗಂಭೀರ ಗಾಯಗಳಾಗಿವೆ.

ಗಾಯಗೊಂಡವರ ಸ್ಥಿತಿ ತೀವ್ರ ಗಂಭೀರವಾಗಿದ್ದು, ದೇಹದಲ್ಲಿ ಆಳವಾದ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಗಾಯಗೊಂಡವರನ್ನು ಸಮೀಪದ ಸಿವಿಲ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಳಿಗ್ಗೆ 7ರ ಸುಮಾರಿಗೆ ಘಟನೆ ನಡೆದಿದೆ. ಶಾರ್ಟ್‌ ಸಕ್ಯೂಟ್‌ನಿಂದಾಗಿ ಕೆಲವೇ ನಿಮಿಷಗಳಲ್ಲಿ ಹೋಟೆಲ್‌ನ ಎರಡು ಮತ್ತು ಮೂರನೇ ಮಹಡಿಯನ್ನು ಬೆಂಕಿ ಆವರಿಸಿಕೊಂಡಿತು. ಹೋಟೆಲ್‌ನಲ್ಲಿ ಒಟ್ಟು 30 ಕೋಣೆಗಳಿತ್ತು. ಅದರಲ್ಲಿ 18 ಕೋಣೆಗಳಲ್ಲಿ ಗ್ರಾಹಕರಿದ್ದರು. ಒಟ್ಟು 35–40 ಮಂದಿ ಗ್ರಾಹಕರು ಅವಘಡದಲ್ಲಿ ಸಿಲುಕಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

ಭಾರಿ ಹೊಗೆ ಎದ್ದಿದ್ದರಿಂದ ಜನರನ್ನು ರಕ್ಷಿಸಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸಪಟ್ಟರು. ಕಾರ್ಯಾಚರಣೆ ವೇಳೆ ಒಬ್ಬ ಸಿಬ್ಬಂದಿಗೆ ಸುಟ್ಟ ಗಾಯಗಳಾಗಿವೆ ಎಂದು ತಿಳಿಸಿದರು.

ನೋಟಿಸ್‌ ನೀಡಲಾಗಿತ್ತು: ಬೆಂಕಿ ಅವಘಡ ರಕ್ಷಣಾ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಲಖನೌ ಅಭಿವೃದ್ಧಿ ಅಧಿಕಾರವು ಇತ್ತೀಚೆಗೆ ಈ ಹೋಟೆಲ್‌ಗೆ ನೋಟಿಸ್‌ ನೀಡಿತ್ತು. ಸೋಮವಾರ ಬೆಂಕಿ ಹೊತ್ತಿಕೊಂಡ ವೇಳೆಯೂ ಹೋಟೆಲ್‌ನಲ್ಲಿದ್ದ ಹೊಗೆಯ ಎಚ್ಚರಿಕೆ ನೀಡುವ ಸೆನ್ಸಾರ್‌ ಕೆಟ್ಟುನಿಂತಿತ್ತು ಎಂದು ಪೊಲೀಸರು ತಿಳಿಸಿದರು.

ತನಿಖೆಗೆ ಆದೇಶ: ಸಿವಿಲ್‌ ಆಸ್ಪತ್ರೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭೇಟಿ ನೀಡಿ, ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಘಟನೆ ಕುರಿತು ಜಂಟಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಆದೇಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.