ನವದೆಹಲಿ: ದೆಹಲಿ ರಸ್ತೆ ಸಾರಿಗೆ ನಿಗಮದ (ಡಿಟಿಸಿ) ಬಸ್ಗಳಲ್ಲಿ ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೂ ಮುಂದಿನ ದಿನಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡುವ ಮುನ್ಸೂಚನೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ‘ಎಕೆ’ ಹೆಸರಿನ ಆ್ಯಪ್ ಒಂದನ್ನು ಕೇಜ್ರಿವಾಲ್ ಬಿಡುಗಡೆಗೊಳಿಸಿದ್ದು, ಇದರಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ವಿಸ್ತರಿಸುವ ಕುರಿತು ಉಲ್ಲೇಖಿಸಿದ್ದಾರೆ. ಮಂಗಳವಾರದಿಂದ ಡಿಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಪ್ರಾರಂಭವಾಗಿದ್ದು, ₹10 ಮುಖಬೆಲೆಯ ಗುಲಾಬಿ ಬಣ್ಣದ ಟಿಕೆಟ್ಗಳನ್ನು ವಿತರಿಸಲಾಯಿತು. ಈ ಮೊತ್ತವನ್ನು ನಿಗಮಕ್ಕೆ ಸರ್ಕಾರವೇ ಮರುಪಾವತಿಸಲಿದೆ.
ಮಹಿಳಾ ಸಬಲೀಕರಣ:‘ಸಾರಿಗೆ ವೆಚ್ಚದ ಹೊರೆ ಇನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ. ಜತೆಗೆ ಮಹಿಳಾ ಉದ್ಯೋಗಿಗಳೂ ಪ್ರಯಾಣ ವೆಚ್ಚದ ಬಗ್ಗೆ ಚಿಂತಿಸಬೇಕಾಗಿಲ್ಲ. ಈ ಸೌಲಭ್ಯದಿಂದ ಮಹಿಳಾ ಸಬಲೀಕರಣವಾಗಲಿದೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ. ‘ಎಲ್ಲ ಹೆಜ್ಜೆ ಏಕಕಾಲದಲ್ಲಿ ಇಡಲು ಸಾಧ್ಯವಿಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿದ್ದು, ಇದರ ಯಶಸ್ಸನ್ನು ವಿಶ್ಲೇಷಿಸಿ ಭವಿಷ್ಯದಲ್ಲಿ ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೂ ಡಿಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ವಿಸ್ತರಿಸುವ ಕುರಿತು ನಿರ್ಧರಿಸಲಾಗುವುದು’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.