ನವದೆಹಲಿ:ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ, ವಿಜ್ಞಾನಿ ಜಿ. ಸತೀಶ ರೆಡ್ಡಿ ಅವರನ್ನು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಪ್ರಧಾನ ನಿರ್ದೇಶಕರನ್ನಾಗಿಶನಿವಾರ ನೇಮಕ ಮಾಡಲಾಗಿದೆ.
ಮುಂದಿನ ಎರಡು ವರ್ಷಗಳ ಅವಧಿಗೆ ಈ ಹುದ್ದೆಯಲ್ಲಿ ಮುಂದುವರಿಯಲಿರುವ ರೆಡ್ಡಿ,ಎಸ್. ಕ್ರಿಸ್ಟೋಫರ್ ಅವರ ಉತ್ತರಾಧಿಕಾರಿಯಾಗಿದ್ದಾರೆ. ಮೇ 28ರಂದು ಕ್ರಿಸ್ಟೋಫರ್ ನಿವೃತ್ತರಾದಾಗಿನಿಂದ ಈ ಹುದ್ದೆ ಖಾಲಿ ಇತ್ತು. ರಕ್ಷಣಾ ಕಾರ್ಯದರ್ಶಿ ಸಂಜಯ್ ಮಿತ್ರಾ ಅವರಿಗೆ ಹೆಚ್ಚುವರಿಯಾಗಿ ಈ ಹುದ್ದೆ ನೀಡಲಾಗಿತ್ತು.
ವ್ಯಕ್ತಿ ಪರಿಚಯ
ದೇಸೀಯ ಕ್ಷಿಪಣಿಗಳ ವಿನ್ಯಾಸ, ಅಭಿವೃದ್ಧಿ ಹಾಗೂ ವೈಮಾನಿಕ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಹೆಸರು ಮಾಡಿರುವ ಸತೀಶರೆಡ್ಡಿ ಆಂಧ್ರಪ್ರದೇಶದವರು. ಅನಂತಪುರದ ಜವಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ (ಜೆಎನ್ಟಿಯು) ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ. ಅಲ್ಲದೆ, ಹೈದರಾಬಾದ್ ಜೆಎನ್ಟಿಯುದಿಂದ ಎಂ.ಎಸ್ ಮತ್ತು ಪಿಎಚ್.ಡಿ ಪಡೆದಿದ್ದಾರೆ. ವಿಜ್ಞಾನಿ ಡಾ. ಅಬ್ದುಲ್ ಕಲಾಂ ಅವರ ಕನಸಿನ ರಕ್ಷಣಾ ಸಂಶೋಧನಾ ಸಂಸ್ಥೆ ‘ರಿಸರ್ಚ್ ಸೆಂಟರ್ ಇಮಾನತ್’ನಲ್ಲಿ ವಿಜ್ಞಾನಿಯಾಗಿ ವೃತ್ತಿಜೀವನ ಆರಂಭಿಸಿದರು. 2015ರ ಮೇನಲ್ಲಿ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿ ನೇಮಕಗೊಂಡರು.
ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳ ವೈಜ್ಞಾನಿಕ ಮಹತ್ವ ಮತ್ತು ಸಂಶೋಧನಾ ಸ್ವರೂಪ, ವಿನ್ಯಾಸ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಕೇಂದ್ರಸರ್ಕಾರಕ್ಕೆ ಸಲಹೆ ನೀಡುವ ಕಾರ್ಯವನ್ನು ಡಿಆರ್ಡಿಒ ಮುಖ್ಯಸ್ಥರು ಮಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.