ADVERTISEMENT

ನನ್ನ ಪತಿ ತಪ್ಪಿತಸ್ಥ: ವಿಕಾಸ್ ದುಬೆ ಪತ್ನಿ ರಿಚಾ ದುಬೆ ಹೇಳಿಕೆ

ಪಿಟಿಐ
Published 11 ಜುಲೈ 2020, 7:08 IST
Last Updated 11 ಜುಲೈ 2020, 7:08 IST
ವಿಕಾಸ್‌ ದುಬೆಯ ಅಂತ್ಯಸಂಸ್ಕಾರ ಸ್ಥಳಕ್ಕೆ ಬಂದಿದ್ದ ಪತ್ನಿ ರಿಚಾ ದುಬೆ ಹಾಗೂ ಅವರ ಪುತ್ರ (ಪಿಟಿಐ ಚಿತ್ರ)
ವಿಕಾಸ್‌ ದುಬೆಯ ಅಂತ್ಯಸಂಸ್ಕಾರ ಸ್ಥಳಕ್ಕೆ ಬಂದಿದ್ದ ಪತ್ನಿ ರಿಚಾ ದುಬೆ ಹಾಗೂ ಅವರ ಪುತ್ರ (ಪಿಟಿಐ ಚಿತ್ರ)   

ಕಾನ್ಪುರ: ‘ನನ್ನ ಪತಿ ತಪ್ಪಿತಸ್ಥರು, ಅವರು ಇಂಥ ಅಂತ್ಯಕ್ಕೆ ಅರ್ಹರಾಗಿದ್ದರು’ ಎಂದು ಎನ್‌ಕೌಂಟರ್‌ನಲ್ಲಿ ಹತನಾದ ವಿಕಾಸ್‌ ದುಬೆಯ ಪತ್ನಿ ರಿಚಾ ದುಬೆ ಶನಿವಾರ ಹೇಳಿದ್ದಾರೆ.

ದುಬೆಯ ಅಂತ್ಯಸಂಸ್ಕಾರ ಶುಕ್ರವಾರ ಇಲ್ಲಿನ ಭೈರೊಘಾಟ್‌ನಲ್ಲಿ ಬಿಗಿ ಭದ್ರತೆಯಲ್ಲಿ ನಡೆಯಿತು. ಅಲ್ಲಿಗೆ ಬಂದಿದ್ದ ರಿಚಾ ಅವರನ್ನು ಎದುರಾದ ಮಾಧ್ಯಮ ಪ್ರತಿನಿಧಿಗಳು, ‘ದುಬೆಯನ್ನು ಈ ರೀತಿ ಹತ್ಯೆ ಮಾಡಿದ್ದು ಸರಿಯೇ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ರಿಚಾ, ‘ಹೌದು ಹೌದು ಹೌದು, ನನ್ನ ಪತಿ ತಪ್ಪಿತಸ್ಥರು, ಅವರು ಈ ರೀತಿಯ ಅಂತ್ಯಕ್ಕೆ ಅರ್ಹರು’ ಎಂದು ಸಿಟ್ಟಿನಿಂದ ನುಡಿದರು.

ಎಂಟು ಮಂದಿ ಪೊಲಿಸರ ಹತ್ಯೆಯ ಆರೋಪಿ ದುಬೆಯನ್ನು ಶುಕ್ರವಾರ ಮುಂಜಾನೆ ಉತ್ತರಪ್ರದೇಶ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು.

ADVERTISEMENT

ಒಂದು ಹಂತದಲ್ಲಿ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಿಚಾ, ಅಶ್ಲೀಲ ಪದಗಳಿಂದ ಅವರನ್ನು ನಿಂದಿಸಿ, ಸ್ಥಳದಿಂದ ತೆರಳುವಂತೆ ಸೂಚಿಸಿದರು ಎನ್ನಲಾಗಿದೆ. ತನ್ನ ಪತಿಯ ಹತ್ಯೆಗೆ ಮಾಧ್ಯಮದವರೂ ಕಾರಣ ಎಂದು ಆಕೆ ಆರೋಪಿಸಿದ್ದಾರೆ.

ಅಂತ್ಯಸಂಸ್ಕಾರದ ನಂತರ ರಿಚಾ ಹಾಗೂ ಅವರ ಪುತ್ರನನ್ನು ಪೊಲೀಸ್‌ ವಾಹನದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಅವರನ್ನು ಬಿಡಲಾಗಿದೆಯೇ ಅಥವಾ ಬಂಧಿಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.

ವಿಕಾಸ್‌ನ ತಂದೆ ರಾಮ್‌ಕುಮಾರ್‌ ದುಬೆ ಘಟನೆಯಿಂದ ಅಂತರ ಕಾಯ್ದುಕೊಂಡಿದ್ದು, ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ‘ಪೊಲೀಸರು ಮಾಡಿದ್ದೆಲ್ಲವೂ ಸರಿಯಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.