ADVERTISEMENT

ಭೂಸೇನಾ ಮುಖ್ಯಸ್ಥರಾಗಿ ಮನೋಜ್ ಮುಕುಂದ್ ನರವಾಣೆ ಅಧಿಕಾರ ಸ್ವೀಕಾರ

ಪಿಟಿಐ
Published 31 ಡಿಸೆಂಬರ್ 2019, 9:44 IST
Last Updated 31 ಡಿಸೆಂಬರ್ 2019, 9:44 IST
ಜನರಲ್ ಬಿಪಿನ್‌ ರಾವತ್‌ ಅವರು ಮನೋಜ್‌ ಮುಕುಂದ್ ನರವಾಣೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು
ಜನರಲ್ ಬಿಪಿನ್‌ ರಾವತ್‌ ಅವರು ಮನೋಜ್‌ ಮುಕುಂದ್ ನರವಾಣೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು   

ನವದೆಹಲಿ:ಲೆಫ್ಟಿನೆಂಟ್ ಜನರಲ್‌ ಮನೋಜ್‌ ಮುಕುಂದ್ ನರವಾಣೆ ಅವರು ಭೂಸೇನಾ ಮುಖ್ಯಸ್ಥರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಇವರು 28ನೇ ಮುಖ್ಯಸ್ಥರಾಗಿದ್ದಾರೆ

ಹುದ್ದೆಯಿಂದ ನಿವೃತ್ತಿಯಾಗಿರುವ ಜನರಲ್ ಬಿಪಿನ್‌ ರಾವತ್‌ ಅವರು ಅಧಿಕಾರ ಹಸ್ತಾಂತರ ಮಾಡಿದರು. ರಾವತ್‌ ಅವರು ‘ರಕ್ಷಣಾ ಪಡೆಗಳ ಮುಖ್ಯಸ್ಥ’ರಾಗಿ (ಸಿಡಿಎಸ್‌) ಸೋಮವಾರ ನೇಮಕಗೊಂಡಿದ್ದಾರೆ.

ಈವರೆಗೆಸೇನೆಯ ಉಪ ಮುಖ್ಯಸ್ಥರಾಗಿದ್ದ 59 ವರ್ಷ ವಯಸ್ಸಿನನರವಾಣೆ ಅವರುಮೊದಲು ಕೊಲ್ಕತ್ತಾದಲ್ಲಿ ಪ್ರಧಾನ ಕಚೇರಿಯಿರುವ ಭೂಸೇನೆಯ ಪೂರ್ವ ಕಮಾಂಡ್‌ನ ಕಮಾಂಡರ್ ಆಗಿದ್ದರು. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನುಸುಳುಕೋರರ ವಿರುದ್ಧದ ಕಾರ್ಯಾಚರಣೆಗಳ ತಂತ್ರದ ರೂವಾರಿಯಾಗಿದ್ದರು.

39 ವರ್ಷಗಳ ಸೇವಾ ಅವಧಿಯಲ್ಲಿ ಹತ್ತು ಹಲವು ಉನ್ನತ ಹುದ್ದೆಗಳನ್ನು ನರವಾಣೆ ನಿರ್ವಹಿಸಿದ್ದಾರೆ. ಜೂನ್ 1980ರಲ್ಲಿ ಸಿಖ್ ರೆಜಿಮೆಂಟ್‌ನಲ್ಲಿ ಕೆಲಸ ಆರಂಭಿಸಿದ್ದ ನರವಾಣೆ ಶಾಂತಿಪಾಲನಾ ಪಡೆಯೊಂದಿಗೆ ಶ್ರೀಲಂಕಾದಲ್ಲೂ ಕಾರ್ಯನಿರ್ವಹಿಸಿದ್ದಾರೆ. ಕೆಲ ಕಾಲ ಮ್ಯಾನ್ಮಾರ್‌ನಲ್ಲಿಯೂ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.

ನರವಾಣೆ ಅವರ ಸೇವೆಗೆ ಹಲವು ಗೌರವಗಳೂ ಸಂದಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯುತ್ತಮ ಬೆಟಾಲಿಯನ್‌ ನಿರ್ವಹಣೆಗಾಗಿ ಸೇನಾ ಪದಕ, ನಾಗಾಲ್ಯಾಂಡ್‌ನಲ್ಲಿ ಅಸ್ಸಾಂ ರೈಫಲ್ಸ್‌ನ ಇನ್‌ಸ್ಪೆಕ್ಟರ್‌ ಜನರಲ್ ಆಗಿ ಸಲ್ಲಿಸಿದ ಸೇವೆಗೆ ವಿಶಿಷ್ಟ ಸೇವಾ ಪದಕ, ಸ್ಟ್ರೈಕ್ ಕಾರ್ಪ್ಸ್ ಮುನ್ನಡೆಸಿದ್ದಕ್ಕಾಗಿ ಅತಿ ವಿಶಿಷ್ಟ ಸೇವಾ ಪದಕ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.