ADVERTISEMENT

ದೆಹಲಿಯಲ್ಲಿ ಕೋವಿಡ್–19 ಪ್ರಕರಣಗಳ ಏರಿಕೆ: ಗಾಜಿಯಾಬಾದ್ ಗಡಿಯಲ್ಲಿ ಸಂಚಾರ ನಿರ್ಬಂಧ

ಏಜೆನ್ಸೀಸ್
Published 25 ಮೇ 2020, 15:25 IST
Last Updated 25 ಮೇ 2020, 15:25 IST
   

ನವದೆಹಲಿ: ದೇಶದಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆಯಾದರೂ, ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್‌–19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಿದ ಒಂದು ವಾರದ ಬಳಿಕ ದೆಹಲಿ ಮತ್ತು ಗಾಜಿಯಾಬಾದ್‌ ಗಡಿಯನ್ನು ಮುಚ್ಚಲಾಗಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ ಜಿಲ್ಲಾಧಿಕಾರಿ ಅಜಯ್‌ ಶಂಕರ್‌ ಪಾಂಡೆ ಸೋಮವಾರ ಈ ಆದೇಶ ಹೊರಡಿಸಿದ್ದಾರೆ.

ಅಗತ್ಯ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ಹಾಗೂ ಮಾನ್ಯ ಪಾಸ್‌ ಹೊಂದಿರುವವರಿಗೆ ಮಾತ್ರವೇ ಗಾಜಿಯಾಬಾದ್‌–ದೆಹಲಿ ಪ್ರಯಾಣಿಸಲು ಅವಕಾಶವಿದೆ. ಭಾರಿ ವಾಹನಗಳು, ಸರಕು ಸಾಗಾಣೆವಾಹನಗಳು, ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ಮತ್ತು ಇತರ ಅಗತ್ಯ ಸೇವೆಗಳಿಗೆ ಬಳಸುವ ವಾಹನಗಳಿಗೆ ಪಾಸ್ ಇಲ್ಲದೆ ಗಡಿ ದಾಟಲು ಅವಕಾಶ ನಿರ್ಬಂಧಿಸಲಾಗಿದೆ.‌

ADVERTISEMENT

ಗಾಜಿಯಾಬಾದ್‌ನಲ್ಲಿ ಇದುವರೆಗೆ ಒಟ್ಟು 227 ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದು, ಇನ್ನೂ 33 ಪ್ರಕರಣಗಳು ಸಕ್ರಿಯವಾಗಿವೆ. ಉತ್ತರ ಪ್ರದೇಶದ ಮತ್ತು ದೆಹಲಿಯ ಗಡಿ ಜಿಲ್ಲೆಯಾಗಿರುವ ಗಾಜಿಯಾಬಾದ್‌ನಲ್ಲಿ ಏಪ್ರಿಲ್‌ನಲ್ಲಿ ಹೆಚ್ಚು ಪ್ರಕರಣಗಳು ವರದಿಯಾದಾಗಲೂ ಗಡಿಯಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು.

ದೆಹಲಿಯಲ್ಲಿ ಇದುವರೆಗೆ 13,418 ಕೋವಿಡ್–19 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 6,540 ಸೋಂಕಿತರು ಗುಣಮುಖರಾಗಿದ್ದು, 261 ಮಂದಿ ಮೃತಪಟ್ಟಿದ್ದಾರೆ. ಉಳಿದ 6,617 ಜನರಿಗೆ ಚಿಕಿತ್ಸೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.