ADVERTISEMENT

ಅರ್ನಬ್‌ ಬಂಧಿಸುವುದಾದರೆ ಮೂರು ದಿನಗಳ ಮೊದಲೇ ನೋಟಿಸ್ ನೀಡಿ -ಬಾಂಬೆ ಹೈಕೋರ್ಟ್

ಟಿಆರ್‌ಪಿ ತಿರುಚಿದ ಪ್ರಕರಣ: ಪೊಲೀಸರಿಗೆ ನಿರ್ದೇಶನ ನೀಡಿದ ಬಾಂಬೆ ಹೈಕೋರ್ಟ್‌

ಪಿಟಿಐ
Published 24 ಮಾರ್ಚ್ 2021, 10:15 IST
Last Updated 24 ಮಾರ್ಚ್ 2021, 10:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರನ್ನು ಬಂಧಿಸುವುದಾದರೆ, ಮೂರು ದಿನಗಳ ಮೊದಲೇ ಅವರಿಗೆ ನೋಟಿಸ್‌ ನೀಡುವಂತೆ ಬಾಂಬೆ ಹೈಕೋರ್ಟ್‌ ಬುಧವಾರ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ.

ರಿಪಬ್ಲಿಕ್ ಟಿವಿ ಮತ್ತು ಎಆರ್‌ಜಿ ಔಟ್ಲಿಯರ್‌ ಮಾಧ್ಯಮದ ಎಲ್ಲ ಸಿಬ್ಬಂದಿ ವಿರುದ್ಧದ ತನಿಖೆಯನ್ನು 12 ವಾರಗಳ ಒಳಗೆ ಪೂರ್ಣಗೊಳಿಸುವುದಾಗಿ ಮಹಾರಾಷ್ಟ್ರ ಸರ್ಕಾರ ನೀಡಿರುವ ಹೇಳಿಕೆಯನ್ನು ಒಪ್ಪಿಕೊಂಡಿರುವ ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಮನೀಶ್ ಪಟೇಲ್ ಅವರನ್ನೊಳಗೊಂಡ ಪೀಠ, ಮುಂಬೈ ಪೊಲೀಸರಿಗೆ ಈ ರೀತಿ ನಿರ್ದೇಶಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ರೀತಿಯ ಪರಿಹಾರಗಳನ್ನು ಕೋರಿ ಅರ್ನಬ್‌ ಗೋಸ್ವಾಮಿ ಮತ್ತು ಎಆರ್‌ಜಿ ಮೀಡಿಯಾ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ಬುಧವಾರ ವಿಚಾರಣೆ ನಡೆಸಿತು.

ADVERTISEMENT

‘ಮುಂಬೈ ಪೊಲೀಸ್‌ನ ಕ್ರೈ ಬ್ರಾಂಚ್‌ ಅಧಿಕಾರಿಗಳ ಬಳಿ ನಮ್ಮ ವಿರುದ್ಧ ಯಾವುದೇ ಪುರಾವೆಗಳಿಲ್ಲ. ಆದರೂ ದೋಷಾರೋಪಪಟ್ಟಿಯಲ್ಲಿ ಶಂಕತ ಆರೋಪಿಗಳ ಹೆಸರನ್ನು ಸೇರಿಸಿ, ಪ್ರಕರಣದ ತನಿಖೆಯನ್ನು ವಿಳಂಬ ಮಾಡಲಾಗುತ್ತಿದೆ‘ ಎಂದು ಅರ್ಜಿದಾರರು ದೂರಿದ್ದರು.

ಸೋಮವಾರ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ, ‘ಈ ಪ್ರಕರಣದಲ್ಲಿ ಯಾವುದೇ ಆರೋಪಿಗಳನ್ನು ಹೆಸರಿಸದೆ ತಿಂಗಳುಗಟ್ಟಲೆ ತನಿಖೆ ನಡೆಸಲು ಸಾಧ್ಯವಿಲ್ಲ‘ ಎಂದು ನ್ಯಾಯಾಲಯ ಪೊಲೀಸರಿಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.