ADVERTISEMENT

ನಡ್ಡಾ ಸಂವಾದ ಕಾರ್ಯಕ್ರಮ: ಕಪ್ಪುಪಟ್ಟಿ ಧರಿಸಿ ದಂತವೈದ್ಯರ ಪ್ರತಿಭಟನೆ

ಗೋವಾ: ಜೈವಿಕ–ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಶುಲ್ಕ ಹೆಚ್ಚಳಕ್ಕೆ ಖಂಡನೆ

ಪಿಟಿಐ
Published 25 ನವೆಂಬರ್ 2021, 6:01 IST
Last Updated 25 ನವೆಂಬರ್ 2021, 6:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಣಜಿ: ರಾಜ್ಯ ಸರ್ಕಾರ ಜೈವಿಕ–ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಶುಲ್ಕವನ್ನು ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಕೆಲ ಖಾಸಗಿ ದಂತ ವೈದ್ಯರು ಕಪ್ಪುಪಟ್ಟಿ ಧರಿಸಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.

ಬಿಜೆಪಿಯ ರಾಜ್ಯ ಘಟಕದ ವೈದ್ಯಕೀಯ ವಿಭಾಗ ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ರಾಜ್ಯ ಸರ್ಕಾರ ಇತ್ತೀಚೆಗೆ ಜೈವಿಕ–ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ಶುಲ್ಕವನ್ನು ಹೆಚ್ಚಿಸಿರುವುದನ್ನು ವಿರೋಧಿಸಿದ ಕೆಲ ದಂತವೈದ್ಯರು, ಈ ಸಂವಾದ ಕಾರ್ಯಕ್ರಮದಲ್ಲಿ ಪ್ರತಿಭಟಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ದಂತವೈದ್ಯಕೀಯ ಸಂಸ್ಥೆ (ಐಡಿಎ) ಸದಸ್ಯ ಡಾ.ಅನಿಲ್‌ ಡಿಸಿಲ್ವ, ‘ಕೆಲವು ವೈದ್ಯರು ಅಪಾರ ಪ್ರಮಾಣದಲ್ಲಿ ಜೈವಿಕವೈದ್ಯಕೀಯ ತ್ಯಾಜ್ಯ ಉತ್ಪಾದನೆ ಮಾಡುತ್ತಾರೆ. ಅಂತಹ ವೈದ್ಯರ ವರ್ಗಕ್ಕೆ ದಂತವೈದ್ಯರನ್ನು ಸೇರಿಸಿರುವುದು ಸರಿಯಲ್ಲ’ ಎಂದು ಹೇಳಿದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್, ‘ಈ ಪ್ರತಿಭಟನೆ ರಾಜಕೀಯ ಪ್ರೇರಿತ’ ಎಂದು ಹೇಳಿದರು.

‘ದಂತವೈದ್ಯರ ಬೇಡಿಕೆಗಳ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ನಿರ್ವಹಣಾ ಶುಲ್ಕ ನಿರ್ಧರಿಸುವುದು ರಾಜ್ಯಕ್ಕೆ ಸಂಬಂಧಿಸಿದ ವಿಷಯ. ಹಾಗಾಗಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಪಾಲ್ಗೊಂಡಿರುವ ಇಂಥ ಕಾರ್ಯಕ್ರಮದ ವೇಳೆ ಪ್ರತಿಭಟನೆ ನಡೆಸುವ ಅಗತ್ಯ ಇರಲಿಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.