ಪಣಜಿ: ಉದ್ದೇಶಿತ ಜೋಡಿ ರೈಲು ಮಾರ್ಗ ಯೋಜನೆಯನ್ನು ವಿರೋಧಿಸಿ ಗೋವಾದ ಅರೋಸಿಮ್ ಗ್ರಾಮದಲ್ಲಿ ಶನಿವಾರವೂ ಪ್ರತಿಭಟನೆ ನಡೆಯಿತು.
ಶುಕ್ರವಾರ ಮಧ್ಯರಾತ್ರಿಯಿಂದ ಆರಂಭಗೊಂಡಿದ್ದ ಪ್ರತಿಭಟನೆ ಶನಿವಾರವೂ ಮುಂದುವರಿಯಿತು. ಕೆಲವು ಗಂಟೆಗಳ ಕಾಲ ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟಿಸಿದ ಪ್ರತಿಭಟನಕಾರರನ್ನು ಮನವೊಲಿಸಿದ ಪೊಲೀಸರು, ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕರ್ನಾಟಕದಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಿಸಲು ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜೋಡಿ ಮಾರ್ಗ ನಿರ್ಮಿಸಲಾಗುತ್ತಿದೆ ಎಂಬುದು ಪ್ರತಿಭಟನಕಾರರ ಆರೋಪ.
ಗೋವಾ ಹಾಗೂ ಕರ್ನಾಟಕ ನಡುವೆ ಈಗಿರುವ ಮಾರ್ಗವನ್ನೇಉದ್ದೇಶಿತ ಯೋಜನೆಯಡಿ ಜೋಡಿ ರೈಲು ಮಾರ್ಗವನ್ನಾಗಿ ಪರಿವರ್ತಿಸಲಾಗುತ್ತಿದೆ. ಇದಲ್ಲದೇ, ಉಭಯ ರಾಜ್ಯಗಳ ನಡುವಿನ ಹೆದ್ದಾರಿ ವಿಸ್ತರಣೆ, ಹೊಸ ವಿದ್ಯುತ್ ಮಾರ್ಗ ನಿರ್ಮಿಸುವ ಯೋಜನೆಗಳನ್ನು ಸಹ ಅನುಷ್ಠಾಗೊಳಿಸಲಾಗುತ್ತಿದೆ.
ಪೋರ್ಚಗೀಸರ ಆಳ್ವಿಕೆಯಿಂದ ಗೋವಾ ವಿಮೋಚನೆಗೊಂಡ 60ನೇ ವಾರ್ಷಿಕೋತ್ಸವ ಸಹ ಶನಿವಾರ ಇರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನೂ ಇದೇ ದಿನ ಹಮ್ಮಿಕೊಳ್ಳಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.