ADVERTISEMENT

ಮರಾಠರನ್ನು ‘ಆಕ್ರಮಣಕಾರರು’ ಎಂದು ಕರೆದ ಗೋವಾ ಪ್ರವಾಸೋದ್ಯಮ ಇಲಾಖೆ

ಪಿಟಿಐ
Published 2 ಏಪ್ರಿಲ್ 2021, 8:39 IST
Last Updated 2 ಏಪ್ರಿಲ್ 2021, 8:39 IST
ಮನೋಹರ್ ಜಜ್ಗಾಂವ್ಕರ್
ಮನೋಹರ್ ಜಜ್ಗಾಂವ್ಕರ್   

ಪಣಜಿ: ಗೋವಾ ಪ್ರವಾಸೋದ್ಯಮ ಇಲಾಖೆಯು ಶುಕ್ರವಾರ ಛತ್ರಪತಿ ಶಿವಾಜಿ ನೇತೃತ್ವದ ಮರಾಠ ಯೋಧರನ್ನು ‘ಆಕ್ರಮಣಕಾರರು’ ಎಂದು ಉಲ್ಲೇಖಿಸಿ, ಟ್ವೀಟ್‌ ಮಾಡಿತ್ತು. ಬಳಿಕ ಆ ಕುರಿತ ಟ್ವೀಟ್‌ ಅನ್ನು ಅಳಿಸಿರುವ ಇಲಾಖೆಯು ಕ್ಷಮೆಯಾಚಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗೋವಾದ ಪ್ರವಾಸೋದ್ಯಮ ಸಚಿವ ಮನೋಹರ್ ಜಜ್ಗಾಂವ್ಕರ್ ಅವರು, ‘ಈ ಟ್ವೀಟ್‌ ಬಗ್ಗೆ ತನಿಖೆ ನಡೆಸಲಾಗುವುದು’ ಎಂದಿದ್ದಾರೆ.

‘ಅಗುವಾಡಾ ಜೈಲು, ಅಗುವಾಡಾ ಕೋಟೆಯ ಸುಂದರ ಭಾಗವಾಗಿದೆ. ಇದನ್ನು 1612ರಲ್ಲಿ ನಿರ್ಮಿಸಲಾಗಿದೆ. ಪೋರ್ಚುಗೀಸರ ಹಿಡಿತವಿದ್ದ ಈ ಕೋಟೆ ಮೇಲೆ ಡಚ್ಚರು ಮತ್ತು ಮರಾಠರುಆಕ್ರಮಣ ಮಾಡಿದ್ದರು’ ಎಂದು ಗೋವಾ ಪ್ರವಾಸೋದ್ಯಮ ಇಲಾಖೆ ಟ್ವೀಟ್‌ ಮಾಡಿತ್ತು.

ADVERTISEMENT

ಆದರೆ ಈ ಟ್ವೀಟ್‌ ಅನ್ನು ತಕ್ಷಣವೇ ಅಳಿಸಿರುವ ಇಲಾಖೆಯು ಕ್ಷಮೆಯಾಚಿಸಿದೆ. ‘ಟ್ವೀಟ್‌ನಲ್ಲಿ ಡಚ್ಚರನ್ನು ಆಕ್ರಮಣಕಾರರು ಎಂದು ಕರೆಯಲಾಗಿದೆ. ಮರಾಠ ಯೋಧರನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ನಮ್ಮಿಂದ ತಪ್ಪಾಗಿದೆ. ಕ್ಷಮಿಸಿ’ ಎಂದು ಇಲಾಖೆ ಮತ್ತೊಂದು ಟ್ವೀಟ್‌ ಮಾಡಿದೆ.

ಆದರೆ ಈ ಬಗ್ಗೆ ವಾಗ್ದಾಳಿ ನಡೆಸಿದ ಕಾಂಗ್ರೆಸ್‌, ‘ಬಿಜೆಪಿ ನೇತೃತ್ವದ ಗೋವಾ ಸರ್ಕಾರವು ಮರಾಠರನ್ನು ಅವಮಾನ ಮಾಡಿದೆ’ ಎಂದು ದೂರಿದೆ.

‘ಗೋವಾ ಸರ್ಕಾರವು ಛತ್ರ‍ಪತಿ ಶಿವಾಜಿ ನೇತೃತ್ವದ ವೀರ ಯೋಧರರನ್ನು ಆಕ್ರಮಣಕಾರರು ಎಂದು ಕರೆಯುವ ಮೂಲಕ ಮರಾಠರನ್ನು ಅವಮಾನಿಸಿದೆ. ಗೋವಾ ಪ್ರವಾಸೋದ್ಯಮ ಇಲಾಖೆಯ ಸ್ಪಷ್ಟೀಕರಣವು ಪೋರ್ಚುಗೀಸರನ್ನು ಪ್ರಚಾರ ಮಾಡಿದಂತಿದೆ’ ಎಂದು ಕಾಂಗ್ರೆಸ್‌ ನಾಯಕ ದಿಗಂಬರ್ ಕಾಮತ್ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.